ಇಂಡೊಲೊಜಿ ವಿಮರ್ಶೆ -10 - ಜೇಮ್ಸ್ ಮಿಲ್- ಭಾರತಕ್ಕೆ ಕಾಲಿಡದೆ ಭಾರತದ ಇತಿಹಾಸ ಬರೆದ ಭೂಪ
ಇಂಡೊಲೊಜಿ ವಿಮರ್ಶೆ -10 - ಜೇಮ್ಸ್ ಮಿಲ್-"ಭಾರತಕ್ಕೆ ಕಾಲಿಡದೆ ಭಾರತದ ಇತಿಹಾಸ ಬರೆದ ಭೂಪ"
ಭಾರತವನ್ನು ಅಧ್ಯಯನ ಮಾಡಿದ ಯುರೂಪಿನ ವಿದ್ವಾಂಸರು ಎರಡು ಬಗೆಯವರು . ಭಾರತ ಹಾಗೂ ಭಾರತೀಯವಾದದ್ದರಲ್ಲಿ ಯಾವುದೆ ಮಹತ್ವವಾದ ಅಂಶಗಳಿಲ್ಲ ಎಂದು ವಾದಿಸಿ ಹೀಳಾಯಿಸಿ ತುಚ್ಛವಾಗಿ ಕಾಣುವವರು , ಹಾಗೆಯೆ ಭಾರತೀಯವಾದದ್ದರಲ್ಲಿ ಅನೇಕ ಉತ್ತಮ ಅಂಶಗಳಿವೆ ಎಂದು ವಾದಿಸಿ ತಮ್ಮ ಇತಿಮಿತಿಯಲ್ಲಿ ಅದನ್ನು ಜಗತ್ತಿಗೆ ಪರಿಚಿಯಿಸಿದವರು . ಮೊದಲನೆಯ ಪ್ರಕಾರದ ವಿದ್ವಾಂಸರು ಭಾರತವನ್ನು ಹೀಗೆಳೆಯುದಷ್ಟೆ ಅಲ್ಲದೆ , ಯುರೋಪಿನ ವಸಾಹತುಷಾಹಿಗಳ ಆಳ್ವಿಕೆಯಿಂದಲೆ ಭಾರತವು ನಾಗರೀಕತೆಯನ್ನು ಹೊಂದಲು ಸಾಧ್ಯವೆಂದು ಸಮರ್ಥಿಸುತಿದ್ದರು . ಅವರಲ್ಲಿ ಭಾರತಕ್ಕೆ ಒಮ್ಮೆಯೂ ಭೇಟಿಕೊಡದೆ , ಭಾರತದ ಯಾವುದೆ ಭಾಷೆಗಳನ್ನು ತಿಳಿಯದೆ ಮೂರು ಸಂಪುಟಗಳಲ್ಲಿ history of British India ಎಂಬ ಪುಸ್ತಕಗಳ ಮೂಲಕ ಭಾರತದ ಇತಿಹಾಸವನ್ನು ಬರೆದ ಜೇಮ್ಸ್ ಮಿಲ್ ಕೂಡ ಒಬ್ಬ.
ಜೇಮ್ಸ್ ಮಿಲ್ 1773- 1836
ಜೇಮ್ಸ್ ಮಿಲ್ ಬಹಳ ಬುದ್ಧಿವಂತನಾದ ಹುಡುಗನಾಗಿದ್ದ. ತನ್ನ ಶಾಲಾ ದಿನಗಳ ಅಧ್ಯಯನದ ನಂತರ ಎಡನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಲಾ ವಿಷಯದಲ್ಲಿ ಪದವಿಯನ್ನು ಸಂಪಾದಿಸಿದ . ನಂತರ ಡಿವಿನಿಟಿ ಸ್ಟಡಿಸ್( ಕ್ರಿಶ್ಚಿಯಾನಿಟಿಯ ಅಧ್ಯಯನ) ಎಂಬ ವಿಭಾಗದಲ್ಲಿ ಅಧ್ಯಯನ ಮಾಡಿದ. ಅದೇ ಆಧಾರದಲ್ಲಿ ಸ್ಕಾಟ್ಲ್ಯಾಂಡಿನ ಚರ್ಚೊಂದರಲ್ಲಿ ಬೋಧಕನಾಗಿ ಕೆಲಸ ಗಿಟ್ಟಿಸಿಕೊಂಡ. ಆದರೆ ಅವನು ನಿಯಮಿತ ಹಾಗು ಸ್ಥಿರ ಆದಾಯದ ಕೆಲಸದ ಹುಡುಕಾಟಕ್ಕಾಗಿ ಇಂಗ್ಲ್ಯಾಂಡಿಗೆ ಹೋದ. ಅಲ್ಲಿ ಅವನಿಗೆ "ಲಿಟರರಿ ಜರ್ನಲ್" ಎಂಬ ಪತ್ರಿಕೆಯಲ್ಲಿ ಸಂಪಾದಕನ ಹುದ್ದೆ ಸಿಕ್ಕಿತು. ಈ ಪತ್ರಿಕೆಯಲ್ಲಿ ಇತಿಹಾಸ, ಸಾಹಿತ್ಯ, ಭೂಗೋಳ ಶಾಸ್ತ್ರ, ಮುಂತಾದ ಅನೇಕ ವಿಭಾಗಗಳಲ್ಲಿ ಲೇಖನಗಳು ಬರುತ್ತಿದ್ದವು . ಇದು ಅವನಿಗೆ ಭಾರತೀಯ ಇತಿಹಾಸವನ್ನು ಬರೆಯುವ ವಿಷಯದಲ್ಲಿ ಸಹಾಯಕವಾಯಿತು . ಇವನು ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ ಎಂಬ ಪುಸ್ತಕವನ್ನು 1806 ರಲ್ಲಿ ಬರೆಯಲು ಪ್ರಾರಂಭಿಸಿದನು . ಮೊದಲು ಈ ಯೋಜನೆಯನ್ನು ಎರಡು ಅಥವಾ ಮೂರು ವರ್ಷಗಳಲ್ಲಿ ಮುಗಿಸಲು ಉದ್ದೇಶಿಸಿದ್ದನು . ಆದರೆ ಈ ಯೋಜನೆಯು ಮುಗಿಯಲು ಹನ್ನೆರಡು ವರ್ಷ ಬೇಕಾಯಿತು . ಈ ಪುಸ್ತಕವು ಬಿಡುಗಡೆಯಾದ ನಂತರ ಅವನಿಗೆ ಒಳ್ಳೆಯ ಯಶಸ್ಸನ್ನು ತಂದುಕೊಟ್ಟಿತು. ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಅಳವಡಿಸಲು ಉದ್ದೇಶಿಸಿದ್ದ ಅನೇಕ ನೀತಿಗಳಿಗೆ ಈ ಪುಸ್ತಕವು ಸಹಕಾರಿಯಾಯಿತು . ಬ್ರಿಟಿಷ್ ಸೇವಾ ಆಯೋಗದ ಮೂಲಕ (ಅದರದ್ದೆ ಮಾದರಿಯನ್ನು ಭಾರತವು UPSC ಮೂಲಕ ಇಂದಿಗೂ ಅನುಸರಿಸುತ್ತಿದೆ. ) ತಯಾರಾಗುತ್ತಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಈ ಪುಸ್ತಕವು ಇತಿಹಾಸ ವಿಭಾಗದ ಅಧ್ಯಯನದಲ್ಲಿ ಅನಿವಾರ್ಯ ಪಠ್ಯಪುಸ್ತಕವಾಗಿತ್ತು . ಭಾರತಕ್ಕೆ ನಿಯೋಜನೆಗೊಳ್ಳುತ್ತಿದ್ದ ಆ ಎಲ್ಲಾ ಅಧಿಕಾರಿಗಳಿಗೆ ಭಾರತದ ವಿಷಯದಲ್ಲಿ ದೃಷ್ಟಿಕೋಣವನ್ನು ಕೊಡುತ್ತಿದ್ದ ಪುಸ್ತಕವೆ "ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ". ಅವನು ಭಾರತದಲ್ಲಿ ಬ್ರಿಟಿಷರ ಸರ್ವಾಧಿಕಾರ ಮಾದರಿಯ ಆಡಳಿತವನ್ನು ಸಮರ್ಥಿಸಿದನು . ಆ ಮಾದರಿಯ ಆಡಳಿತವನ್ನು ತರಲೆಂದೆ ಭಾರತದಲ್ಲಿ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ಶ್ರಮಿಸುತ್ತಿದ್ದರು . ಈ ಪುಸ್ತಕವು ಅನೇಕ ಬಾರಿ ಮರುಮುದ್ರಣಗೊಂಡಿತು . ಶಾಲಾ ಕಾಲೆಜುಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಂಡಿತು. ಆಕ್ಸಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳು ಇದನ್ನು ಪ್ರಕಾಶಿಸಿದವು . ಭಾರತದ ಪ್ರಾಚೀನ ಇತಿಹಾಸ ಮತ್ತು ಹಿಂದೂ ಧರ್ಮದ ಕುರಿತಾದ ಅಧ್ಯಯನಕ್ಕೆ ಈ ಪುಸ್ತಕವು ಪ್ರಮುಖ ಆಧಾರವಾಯಿತು.
ಈಸ್ಟ್ ಇಂಡಿಯಾ ಕಂಪನಿಯು 1819ರಲ್ಲಿ ಇವನನ್ನು ಇಂಗ್ಲ್ಯಾಂಡಿನಲ್ಲಿ ಭಾರತೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಇಂಡಿಯಾ ಹೌಸ್ ಎಂಬ ಕಛೇರಿಯಲ್ಲಿ ಉನ್ನತ ಹುದ್ದೆಗೆ ನಿಯಮಿಸಿದರು. 1921 ರಲ್ಲಿ ಭಾರತದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ನಾಲ್ಕು ಉನ್ನತಾಧಿಕಾರಿಗಳಲ್ಲಿ ಒಬ್ಬನಾದ. ಆ ಕಾಲದಲ್ಲಿ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದ ಅಧಿಕಾರಿಗಳಲ್ಲಿ ಒಬ್ಬನಾದ. ಇವನ ಹುದ್ದೆಯ ಪ್ರಭಾವವದಿಂದ ಅವನ ಮಗನಾದ ಜಾನ್ ಮಿಲ್ ನಿಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೆ ಜುನಿಯರ್ ಕ್ಲರ್ಕ್ ಹುದ್ದೆಯು ದೊರಕಿತು . ಅಸ್ಥಿರವಾದ ಆದಾಯ ಮತ್ತು ಕೆಲಸದಿಂದ ಹೆಣಗಾಡುತ್ತಿದ ಅವನಿಗೆ ಈ ಪುಸ್ತಕವು ಅತ್ಯಂತ ಸ್ಥಿರವಾದ ಬದುಕು ಹಾಗೂ ಪ್ರತಿಷ್ಠೆಯನ್ನು ಗಳಿಸಿಕೊಟ್ಟಿತು .
History of British India
ಈ ಪುಸ್ತಕವನ್ನು ಬರೆಯುವ ಕಾಲದಲ್ಲಿ ಅವನು ಒಂದು ಬಾರಿಯು ಭಾರತಕ್ಕೆ ಭೇಟಿ ಕೊಡುವುದಾಗಲಿ, ಭಾರತೀಯ ಭಾಷೆಗಳನ್ನು ಅಭ್ಯಸಿಸುವುದಾಗಲಿ ಅನಿವಾರ್ಯವೆಂದು ಭಾವಿಸಲಿಲ್ಲ. ಅದಕ್ಕೆ ವಿರುದ್ದವಾಗಿ ಅವನ ಈ ಕ್ರಮವನ್ನು ತನ್ನ ಮುನ್ನುಡಿಯಲ್ಲಿ ಅನೇಕ ಉದಾಹರಣೆಗಳೊಂದಿಗೆ ಸಮರ್ಥಿಸಿದ್ದಾನೆ. ಅಷ್ಟೆ ಅಲ್ಲದೆ ಅವನ ಪಾಶ್ಚಾತ್ಯಸಂಸ್ಕೃತಿಯ ಶ್ರೆಷ್ಠತಾ ಬುದ್ಧಿಯು ಯಾವ ಮಟ್ಟದಲ್ಲಿತ್ತು ಎನ್ನುವುದನ್ನು ಅವನ ಮುನ್ನುಡಿಯ ಈ ಅಂಶದಿಂದ ತಿಳಿಯಬಹುದು –
"It will not, I presume, admit of much dispute, that the habits which are subservient to the successful exploration of evidence are more likely to be acquired in Europe than in India…. A man who is duly qualified may attain more knowledge of India in one year in his closet in England, than he could obtain during the course of the longest life, by the use of his eyes and ears in India".
"ಭಾರತದ ಕುರಿತಾಗಿ ಅಧ್ಯಯನವನ್ನು ನಡೆಸಲು ಆಧಾರಗಳು, ಪುಸ್ತಕಗಳು ಹಾಗೂ ಪ್ರಮಾಣಗಳು ಭಾರತಕ್ಕಿಂತ ಯುರೋಪಿನಲ್ಲಿ ಹೆಚ್ಚು ದೊರೆಯುತ್ತವೆ . ಒಬ್ಬ ಅರ್ಹನಾದ ವಿದ್ವಾಂಸ ಭಾರತದ ಜ್ಞಾನವನ್ನು ಭಾರತದಲ್ಲಿದ್ದು ತನ್ನ ಜೀವಿತಾವಧಿಯಲ್ಲಿ ಪಡೆಯುವದಕ್ಕಿಂತ ಹೆಚ್ಚಿನ ಜ್ಞಾನವನ್ನು ಇಂಗ್ಲ್ಯಾಂಡಿನ ತನ್ನ ಕೊಣೆಯಲ್ಲಿರುವ ಒಂದು ಕಪಾಟಿನ ಪುಸ್ತಕಗಳ ಅಧ್ಯಯನದಿಂದ ಪಡೆಯಬಹುದು''.
ಹಾಗಾಗಿ ಭಾರತದ ಇತಿಹಾಸವನ್ನು ಬರೆಯುವ ಸಮಯದಲ್ಲಿ ಒಮ್ಮೆಯೂ ಭಾರತಕ್ಕೆ ಕಾಲಿಡಲಿಲ್ಲ, ಭಾರತೀಯದ್ದಾದ ಯಾವ ಭಾಷೆಯ ಅಧ್ಯಯನವನ್ನು ಮಾಡಲಿಲ್ಲ. ಜೇಮ್ಸ್ ಮಿಲ್ ತನ್ನ ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ ಎಂಬ ಮೂರು ಸಂಪುಟಗಳ ಪುಸ್ತಕವನ್ನು ಹಿಂದೂ,ಮುಸ್ಲಿಮ್ ಮತ್ತು ಬ್ರಿಟಿಷ್ ಎಂಬುವುದಾಗಿ ವಿಭಾಗಗೊಳಿಸಿದ್ದಾನೆ. ಮೊದಲನೆ ಸಂಪುಟದ ಎಂಟು ಅಧ್ಯಾಯಗಳನ್ನು ಪ್ರಾಚೀನ ಭಾರತ ಹಾಗೂ ಹಿಂದೂ ಧರ್ಮದ ವಿಮರ್ಶೆಗಾಗಿ ಮೀಸಲಾಗಿಟ್ಟಿದ್ದಾನೆ . ಅದರಲ್ಲಿ ಅವನು ಹಿಂದೂ ಧರ್ಮವು ಅತ್ಯಂತ ಬರ್ಬರತೆ, ಅನಾಗರೀಕತೆಯಿಂದ ಕೂಡಿದ್ದು ಯಾವುದೆ ವೈಜ್ಞಾನಿಕ ತಳಹದಿಯಿಲ್ಲದ ಚಿಂತನೆಗಳಿನ್ನೊಂಡಿದೆ ಎಂದು ಪ್ರತಿಪಾದಿಸಿದ್ದಾನೆ. ಭಾರತಕ್ಕೆ ಯಾವುದೆ ಭವ್ಯವಾದ ಇತಿಹಾಸವಾಗಲಿ ಶ್ರೇಷ್ಠತೆಯಾಗಲಿ ಇರಲಿಲ್ಲವೆಂದೂ ಪ್ರತಿಪಾದಿಸುವುದೆ ಅವನ ಪುಸ್ತಕದ ಉದ್ದೇಶವಾಗಿದೆ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ. ಭಾರತದಲ್ಲಿ ಜಾತಿಪದ್ದತಿ , ತಾರತಮ್ಯ ,ದಬ್ಬಾಳಿಕೆಯಂತಹ ಅನಿಷ್ಟಗಳೆ ತುಂಬಿಕೊಂಡಿದ್ದು , ಅಲೆಗ್ಸಾಂಡರ್ ನ ಆಕ್ರಮಣದ ಕಾಲದಲ್ಲಿ ಗ್ರೀಕರ ದಾಖಲೆಗಳಲ್ಲಿ ಭಾರತವನ್ನು ಯಾವ ರೀತಿಯಾಗಿ ಚಿತ್ರಿಸಿದ್ದಾರೊ ಬ್ರಿಟಿಷ್ ಆಗಮನದ ಈ ಕಾಲದಲ್ಲೂ ಅದಕ್ಕಿಂತ ಸ್ವಲ್ಪವೂ ವ್ಯತ್ಯಾಸವನ್ನು ಕಾಣುತ್ತಿಲ್ಲ. ಭಾರತವು ನಾಗರೀಕತೆಯ ಸುಧಾರಣೆಯಲ್ಲಿ ಒಂದಿಂಚೂ ಮುಂದುವರೆದಿಲ್ಲವೆಂದು ಹೇಳುತ್ತಾ ಎರಡು ಸಾವಿರ ವರ್ಷದ ಇತಿಹಾಸವನ್ನು ನಿರಾಕರಿಸಿಬಿಡುತ್ತಾನೆ. ಇವನ ಕಲ್ಪನಾವಿಲಾಸಕ್ಕೆ ಉದಾಹರಣೆಯೆಂದರೆ ಇವನು ಭಾರತ ಸಾಮಾಜಿಕ ವ್ಯವಸ್ಥೆಯನ್ನು ಅರ್ಥೈಸಿದ್ದು . ಅವನ ಪ್ರಕಾರ ಬ್ರಾಹ್ಮಣ ಅತ್ಯಂತ ಶ್ರೀಮಂತ ಹಾಗು ಹೆಚ್ಚು ಅಧಿಕಾರದ ಶಕ್ತಿಯನ್ನು ಹೊಂದಿದ ಜನಾಂಗ. ಅದಕ್ಕೆ ಅವನು ಕೊಡುವ ಕಾರಣ , - "As the greater part of life among the Hindus is engrossed by the performance of an infinite and burdensome ritual, which extends to almost every hour of the day, and every function of nature and society, the Brahmens, who are the sole judges and directors in these complicated and endless duties, are rendered the uncontrollable masters of human life. Thus elevated in power and privileges, the ceremonial of society is no less remarkably in their favor."
"ಹಿಂದೂ ಧರ್ಮಿಯರ ಜೀವನದ ಅತಿ ಹೆಚ್ಚು ಭಾಗ ಪೂಜೆ, ಆಚರಣೆಗಳಿಂದಲೆ ಕೂಡಿರುತ್ತದೆ. ಅವರು ಗಂಟೆ ಗಂಟೆಗೆ ಪೂಜೆ ಮೊದಲಾದ ವಿಧಿ ವಿಧಾನಗಳನ್ನು ನಡೆಸುತ್ತಿರುತ್ತಾರೆ . ಬ್ರಾಹ್ಮಣರು ಮಾತ್ರ ಉಳಿದರಿಗಾಗಿ ಪೂಜೆ ಮೊದಲಾದ ವಿಧಿ ವಿಧಾನಗಳನ್ನು ಮಾಡುವ ಅಧಿಕಾರವನ್ನು ಹೊಂದಿದ್ದಾರೆ. ಹೀಗಾಗಿ ಈ ಬ್ರಾಹ್ಮಣರು ಉಳಿದೆಲ್ಲಾ ಜನಾಂಗದ ಜೀವನದ ಮೇಲೆ ಹತೋಟಿಯನ್ನು ಪಡೆದಿರುತ್ತಾರೆ .ಇದರಿಂದ ಅನಿಯಮಿತವಾದ ಅಧಿಕಾರ ಮತ್ತು ಸಂಪತ್ತನ್ನು ಪಡೆದಿದ್ದಾರೆ " ಹೀಗೆ ಬ್ರಾಹ್ಮಣರು ಜಾತಿ ಪದ್ಧತಿಯನ್ನು ಸೃಷ್ಟಿಸಿ ಉಳಿದವರ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಾರೆ ಎಂದು ಬ್ರಾಹ್ಮಣರನ್ನು ನಿಂದಿಸುತ್ತಾನೆ. ಕ್ಷ್ರತ್ರಿಯರನ್ನು ದಬ್ಬಾಳಿಕೆಯ ಸ್ವಭಾವದ ಜನಾಂಗವೆಂದು ನಿಂದಿಸುತ್ತಾ, ಯಾವ ಸಮಾಜದಲ್ಲಿ ಕ್ಷತ್ರಿಯರಿಗೆ ಹೆಚ್ಚು ಬೆಲೆಯಿರುತ್ತದೋ, ಅದು ಅನಾಗರೀಕ ಹಾಗೂ ಬರ್ಬರ ಸಮಾಜವೆಂದು ಷರಾ ಬರೆಯುತ್ತಾನೆ. ಇನ್ನೂ ವೈಶ್ಯರನ್ನು ಶೂದ್ರರನ್ನು ಮೇಲಿನ ಎರಡು ವರ್ಗದಿಂದ ದಬ್ಬಾಳಿಕೆಗೊಳಗಾದವರು ಎಂದೂ ಬಿಂಬಿಸಿದ್ದಾನೆ. ಹಿಂದೂ ಸಮಾಜದಲ್ಲಿ ಈ ನಾಲ್ಕು ವರ್ಣದವರು ಜನಸಂಖ್ಯೆಯಲ್ಲಿ ಸಮಾನವಾಗಿದ್ದಾರೆಂದು ಕಲ್ಪಿಸಿದ್ದಾನೆ. ಹೀಗೆ ಹಿಂದೂಗಳ ಆಚರಣೆ, ಸಂಸ್ಕೃತಿ, ಕಾನೂನು, ಆಡಳಿತ ಮುಂತಾದ ಎಲ್ಲಾ ಅಂಶಗಳನ್ನು ಯಾವ ಯಾವ ಪ್ರಕಾರಗಳಿಂದ ಅನಾಗರಿಕವೆಂದು ಬಿಂಬಸಬಹುದೊ ಆ ಎಲ್ಲಾ ರೀತಿಯ ಪ್ರಯತ್ನವನ್ನು ತನ್ನ ಪುಸ್ತಕದಲ್ಲಿ ಮಾಡಿದ್ದಾನೆ.
ಇವನು ಒಂದು ಬಾರಿಯಾದರೂ ಭಾರತಕ್ಕೆ ಭೇಟಿಯನ್ನು ಮಾಡಿದ್ದರೆ ಈ ಭ್ರಾಂತಿಯು ಅವನಲ್ಲಿರುತ್ತಿರಲಿಲ್ಲ. ಅವನ ಈ ಪುಸ್ತಕದ ಬರವಣೆಗೆ ಸಹಾಯ ಮಾಡಿದ , ಹಾಗೂ ಮುಂದಿನ ಸಂಪುಟಗಳ ಸಂಪಾದಕನಾದ H.H.Wilson ಎಂಬುವವನು ಇವನ ಕಾಲ್ಪನಿಕ ಕಟ್ಟು ಕಥೆಗಳನ್ನು ಇದೆ ಸಂಪುಟದ ಪುನರ್ಮುದ್ರಣದಲ್ಲಿ ಅಡಿಟಿಪ್ಪಣಿಗಳಲ್ಲಿ ಪ್ರಮಾಣಗಳ ಮೂಲಕ ನಿರಾಕರಿಸಿದ್ದಾನೆ . ವಾಸ್ತವಿಕವಾಗಿ ಈ ದೃಷ್ಟಿಕೋಣವು ಅವನಿಗೆ ಇಂಗ್ಲ್ಯಾಂಡಿನ ಸಮಾಜದಿಂದಲೆ ಲಭಿಸಿದ್ದು. ಇಂಗ್ಲ್ಯಾಂಡಿನ ಪಾದ್ರಿಗಳು, ಪ್ರೀಸ್ಟ್ ಗಳು ಮತ್ತು ಅಲ್ಲಿನ ಅಸಮಾನತೆಯ ವಿರುದ್ದ ಇವನು ಅನೇಕ ಲೇಖನಗಳನ್ನು ಬರೆದು ಸುಧಾರಣಾವಾದಿಯೆಂದು ಪ್ರಸಿದ್ಧನಾಗಿದ್ದ. ಆ ಪೂರ್ವಾಗ್ರಹದಿಂದಲೆ ಭಾರತದ ಇತಿಹಾಸವನ್ನು ಬರೆದ ಹಾಗೂ ಅಲ್ಲಿ ಯಾವ ಸುಧಾರಣೆಗಳನ್ನು ಬಯಸಿದ್ದನೂ ಅದನ್ನೆ ಭಾರತದಲ್ಲೂ ತರಲೂ ಈಸ್ಟ್ ಇಂಡಿಯಾ ಕಂಪನಿಗೆ ಸಲಹಗಳನ್ನಿತ್ತ.
ಎರಡುನೂರು ವರ್ಷಗಳ ಹಿಂದೆ ಬರೆದ ಪುಸ್ತಕದ ವಿಷಯದಲ್ಲಿ ಈಗ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಏನಿದೆ ಎಂದು ಅನೇಕರಿಗೆ ಪ್ರಶ್ನೆ ಮೂಡಬಹುದು , ಆದರೆ ಅವನ ಈ ಪುಸ್ತಕ ಕೆಲವು ಕಡೆ ನೇರವಾಗಿ, ಕೆಲವಡೆ ಪರೋಕ್ಷವಾಗಿ ತನ್ನ ಪ್ರಭಾವವನ್ನು ಬೀರುತ್ತಲೆ ಇದೆ. ಇಂತಹ ಹಿನ್ನಲೆಯಿಂದ ಬರೆದ ಪುಸ್ತಕವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ನೀತಿ ನಿರ್ಧಾರಗಳಲ್ಲಿ ಪ್ರಮುಖ ಪಾತ್ರವಹಿಸಿತು . ಅದೇ ನೀತಿಗಳು ಸ್ವಾತಂತ್ರ್ಯಾನಂತರವು ಮುಂದುವರೆದವು. ಹಿಂದೂಗಳ ಕುರಿತಾಗಿ ಈ ವಿಚಾರಗಳನ್ನು ನಯವಾದ ರೀತಿಯಲ್ಲಿ ಎಡಪಂಥೀಯರು ಭಾರತೀಯ ಪಠ್ಯಪುಸ್ತಕಗಳಲ್ಲಿ ಸೇರಿಸಿದ್ದರ ಪ್ರಭಾವದಿಂದ ಎರಡು ತಲೆಮಾರಿನ ಜನಾಂಗವೆ ಮೂಲದ ಪರಿವಿಲ್ಲದೆ ಕೀಳಿರಿಮೆಯಲ್ಲಿ ಬದುಕುವಂತಾಯಿತು. ಅಷ್ಟೆ ಅಲ್ಲದೆ ಈ ಪುಸ್ತಕದ ಪ್ರಭಾವವೆಷ್ಟೆಂದರೆ, ಇದೆ ಪುಸ್ತಕದ ಆಧಾರದಲ್ಲಿ ಬರೆದ ಪಠ್ಯಗಳನ್ನು ಅಮೇರಿಕದ ಶಾಲೆಗಳಲ್ಲಿ ಬೋಧಿಸುತ್ತಿದ್ದಾರೆ. ಭಾರತೀಯ ಮೂಲದ ಮಕ್ಕಳು ಅಲ್ಲಿ ಆರನೆಯ ತರಗತಿಯಿಂದಾರಂಭಿಸಿ ಹಿಂದೂಧರ್ಮದ ಹಾಗೂ ಪ್ರಾಚೀನ ಭಾರತದ ಕುರಿತಾದ ಈ ಪುಸ್ತಕದ ಆಧಾರದಿಂದ ಮಾಡುವ ಪಾಠಗಳಿಂದ ಯಾವ ರೀತಿಯಾದ ಮಾನಸಿಕ,ಸಾಮಾಜಿಕ ಹಿಂಸೆಯನ್ನು ಹಾಗೂ ಕಿಳರಿಮೆಯನ್ನು ಅನುಭವಿಸುತ್ತಿದ್ದಾರೆ ಎನ್ನುವ ಕುರಿತಾಗಿ "Colonial discourses and the suffering of Indian American" ಎಂಬ ಸುದೀರ್ಘವಾದ ಪುಸ್ತಕವೆ ಪ್ರಕಟವಾಗಿದೆ .
ವಸಾಹಾತುಶಾಹಿಯ ಶಕ್ತಿಗಳ ಪರಿಣಾಮದಿಂದ ಉಂಟಾದ ಪರಿಣಾಮಗಳನ್ನು ಅರಿಯದ್ದರೆ , ಅದನ್ನು ನಿವಾರಿಸಲು ಕ್ರಮಕೈಗೊಳ್ಳಲು ಸಾಧ್ಯವೆ ಇಲ್ಲವೆಂಬುವುದನ್ನು ನಾವು ಅರಿತುಕೊಳ್ಳಬೇಕು. ಆ ನಿಟ್ಟಿನಲ್ಲಿಯೆ ಜಾಗೃತಿಗಾಗಿ ಈ ನನ್ನ ಲೇಖನ ಸರಣಿ..
ಗ್ರಂಥ ಋಣ
1.The History of British India
Author -James mill
2.Colonial discourses and the suffering of Indian American
Author - Krishna Maheshwari and Kundan Singh
ಡಾ.ಶ್ರೀನಿಧಿ ಪ್ಯಾಟಿ
ಪೂರ್ಣಪ್ರಜ್ಞ ಸಂಶೋಧನ ಮಂದಿರ, ಬೆಂಗಳೂರು.
Comments
Post a Comment