ಅತ್ತೆ-ಸೊಸೆಯರಿಗೆ ಜಗಳವೇಕೆ? ಮಾಂಸಾಹಾರ,ಸಸ್ಯಾಹಾರ ಯಾವುದು? - ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು ಹೇಳಿದ ಮಾರ್ಮಿಕವಾದ ಕಥೆ
ಅತ್ತೆ-ಸೊಸೆಯರಿಗೆ ಜಗಳವೇಕೆ? ಮಾಂಸಾಹಾರ,ಸಸ್ಯಾಹಾರ ಯಾವುದು? - ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು ಹೇಳಿದ ಮಾರ್ಮಿಕವಾದ ಕಥೆ
ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ
ವಸು ಎಂಬ ರಾಜನೊಬ್ಬನಿಗೆ ಬ್ರಹ್ಮಹತ್ಯಾ ದೋಷವು ಬಂದೊದಗುತ್ತದೆ. ಆ ರಾಜನು ಬ್ರಹ್ಮಪಾರಸ್ತೋತ್ರವನ್ನು ಪಠಿಸುತ್ತಾ ತಪಸ್ಸನ್ನು ಆಚರಿಸುತ್ತಾನೆ. ಆ ಸ್ತೋತ್ರದ ಪ್ರಭಾವದಿಂದ ರಾಜನಲ್ಲಿರುವ ಬ್ರಹ್ಮಹತ್ಯಾ ದೋಷವು ವ್ಯಾಧ(ಬೇಡ) ಜನ್ಮವನ್ನು ಪಡೆಯುತ್ತದೆ. ಆ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾದ ರಾಜನು ಮುಕ್ತಿಯನ್ನು ಪಡೆಯುತ್ತಾನೆ ಎನ್ನುವುದು ವರಾಹ ಪುರಾಣದಲ್ಲಿ ನಿರೂಪಿದವಾದ ರಾಜನ ವೃತ್ತಾಂತ. ಇದರ ಆಧಾರದಿಂದ ಆಚಾರ್ಯರು ಕರ್ಮಗಳಿಗೂ ಜೀವಸ್ವರೂಪವಿಗೆ ಎಂಬ ತತ್ವವನ್ನು ಅನುವ್ಯಾಖ್ಯಾನದ ತೃತೀಯಾಧ್ಯಾಯದಲ್ಲಿ ನಿರೂಪಿಸಿದ್ದಾರೆ.
ಬ್ರಹ್ಮಹತ್ಯಾ ದೋಷವು ಬೇಡನ ಜನ್ಮವನ್ನು ಪಡೆದ ಮೇಲೆ ಎನು ಮಾಡಿದನು ಎಂಬ ಕುತೂಹಲವುಂಟಾಗುತ್ತದೆ. ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು.ತಮ್ಮ ಸಂನ್ಯಾಸಪದ್ಧತಿ ಎಂಬ ಗ್ಲಂಥದಲ್ಲಿ ವಿಷ್ಣುನೈವೇದ್ಯದ ಮಹತ್ವವನ್ನು ಸೂಚಿಸುವ ಪ್ರಕರಣದಲ್ಲಿ ವರಾಹ ಪುರಾಣದಲ್ಲಿರುವ ಬೇಡನ ರೋಚಕವಾದ ವೃತ್ತಾಂತವನ್ನು ಉಲ್ಲೇಖಿಸುತ್ತಾರೆ. ವ್ಯಾಧಶ್ವಶುರಸಂವಾದ ಎಂದು ಈ ಪ್ರಕರಣವು ತುಂಬಾ ಅಪರೂಪದ ವಿಷಯಗಳನ್ನೊಳಗೊಂಡಿದೆ.
ವ್ಯಾಧತ್ವೇ ಚ ಸುಧರ್ಮಜ್ಞೋ ಬಭೂವ ಚ ತಥಾಕರೋತ್
ಸೋಽಮಾವಾಸ್ಯಾಂ ತಥಾ ಪುತ್ರ್ಯಾಃ ಶ್ವಶುರಸ್ಯ ಗೃಹಂ ಪ್ರತಿ |
ಗತ್ವಾ ತಮಬ್ರವೀದ್ಧಿಂಸಾ ತ್ವಯಾ ನ ಕ್ರಿಯತೇ ಕಿಲ
ಜೀವಾನಾಂ ತನ್ಮಯೇಹಾದ್ಯ ಚಾಗತಂ ಹಿಂಸಯಾ ವಿನಾ
ಭೋಕ್ತುಮುಕ್ತೇತ್ಯಥೋಽಪೃಚ್ಛದ್ ಅಸ್ತಿ ಹಿಂಸಾಂ ವಿನಾ ಪರಂ
ಯತ್ಕಿಂಚಿದಿತಿ ತೇನೋಽಕ್ತೋ ವ್ರೀಹೀಂಸ್ತ್ವಸ್ಯ ತ್ವದರ್ಶಯತ್
ವ್ರೀಹಿಸ್ಥಜೀವಹಿಂಸಾಯಾಃ ಪ್ರಾಪ್ಯತ್ವಾತ್ತೇನ ಧಿಕೃತೇ
ಪುನರನ್ಯಾಂ ಸ್ತುವನ್ಯಾನ್ವೈ ದೃಷ್ಟ್ವಾ ತಾಂಸ್ತು ತತೋಽಧಿಕಂ|
ಧಿಕೃತ್ಯಾಯಾತ್ ಸ ತು ವ್ಯಾಧಃ ತತ್ಪುತ್ರ್ಯಾಃ ಶ್ವಶುರೋಽಪಿ ಚ
ಅನ್ವೇವ ಗತ್ವಾ ತತ್ಸರ್ವಮಶ್ರೃಣೋತ್ಪರಮಂ ಶುಭಂ ||
ಇದಂ ಸರ್ವಂ ಹರೇರ್ಬ್ರಹ್ಮಾ ಪೂಜಾರ್ಥಮಸೃಜತ್ಪ್ರಭುಃ
ಸೃಷ್ಟ್ವಾ ಸರ್ವಂ ಹರೇರ್ಬ್ರಹ್ಮಾ ಪೂಜಾಂ ಚ ಚಕ್ಲೃಪೇ ಸ್ವಯಂ||
ತಥೈವ ಚಕ್ಲೃಪೇನ್ಯೇಷಾಂ ತತಸ್ತೇಷಾಂ ಚ ಭೋಜನಂ
ತದ್ದಾತವ್ಯಂ ಹರೇಃ ಸಮ್ಯಗನ್ಯಥಾ ಪಾಪಮಾಪ್ನುಯಾತ್ ||
ಅಹಮೇಕಂ ಮೃಗಂ ಹತ್ವಾ ಚಾರ್ಪಯಾಮಿ ಹರೇಃ ಪ್ರಭೋಃ ತತೋಽತಿಥಿಸ್ವಕೀಯೈಶ್ಚ ಭೋಕ್ಷ್ಯಾಮೀತಿ ತದೀರಿತಂ ||
ಶ್ರುತ್ವಾ ತಥೈವ ಕೃತ್ವಾ ಚ ವಿಷ್ಣುಲೋಕಮವಾಪ್ತವಾನ್ | ( ಸನ್ನ್ಯಾಸಪದ್ಧತೀ 3-143-151)
ವಸುರಾಜನ ದೇಹದಿಂದ ಹೊರಟ ಬೇಡ ನಾಲ್ಕುಸಾವಿರವರ್ಷಗಳ ಕಾಲ ತನ್ನ ಕುಲವೃತ್ತಿಯನ್ನಾಚರಿಸುತ್ತಾ ಸದಾಚಾರಸಂಪನ್ನನಾಗಿದ್ದನು . ಅವನು ತನ್ನ ಕುಟುಂಬಪೋಷಣೆಯ ಉದ್ದೇಶದಿಂದ ಪ್ರತಿದಿನವೂ ಒಂದು ಪ್ರಾಣಿಯನ್ನು ಮಾತ್ರ ಕೊಂದು ಅತಿಥಿಗಳನ್ನು ,ಸೇವಕರನ್ನು ತೃಪ್ತಿಪಡಿಸುತ್ತಿದ್ದನು. ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಪ್ರಾಣಿಗಳನ್ನು ಕೊಲ್ಲುತ್ತಿರಲಿಲ್ಲ. ಅವನು ಆಮಾವಾಸ್ಯೇ, ಸಂಕ್ರಮಣ ಮುಂತಾದ ಪರ್ವಕಾಲದಲ್ಲಿ ಪಿತೃಗಳಿಗೆ ಶ್ರಾದ್ಧವನ್ನಾಚರಿಸುತ್ತಿದ್ದನು . ಇಂತಹ ಧರ್ಮವ್ಯಾಧನಿಗೆ ಅರ್ಜುನಿಕಾಳೆಂಬ ಮಗಳು ಜನಿಸಿದಳು . ಅವಳನ್ನು ಮತಂಗ ಋಷಿಯ ಮಗನಿಗೆ ಕೊಟ್ಟು ಮದುವೆ ಮಾಡಿದನು. ಅವಳು ಅತ್ತೆ, ಮಾವನ ಸೇವೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದಳು. ಬಹಳ ಕಾಲದ ಮೇಲೆ ಸಣ್ಣ ತಪ್ಪು ಮಾಡಿದ್ದಕ್ಕಾಗಿ ಅತ್ತೆಯು " ನೀನು ಪ್ರಾಣಿಗಳನ್ನು ಕೊಲ್ಲುವವನ ಮಗಳು , ನಿನ್ನಂತವಳಿಗೆ ಪತಿ ಸೇವೆ, ತಪಸ್ಸು ಇವುಗಳ ಬಗ್ಗೆ ಎಲ್ಲಿ ಜ್ಞಾನವಿದ್ದೀತು '' ಎಂದು ನಿಂದಿಸುತ್ತಾಳೆ. ಅದನ್ನು ಕೇಳಿ ಬೇಸರದಿಂದ ಅಳುತ್ತಾ ತಂದೆಯ ಮನೆಗೆ ಹೋಗಿ ಎಲ್ಲವನ್ನು ವಿವರಿಸುತ್ತಾಳೆ . ಇದನ್ನು ಕೇಳಿ ಸಿಟ್ಟುಗೊಂಡ ಬೇಡನು ಋಷಿಯ ಮನೆಗೆ ಬಂದನು. ಮತಂಗನು ಅವನಿಗೆ ಆದರಾತಿಥ್ಯವನ್ನು ನೆರವೇರಿಸಿ ಬಂದ ಕಾರಣವನ್ನು ಕೇಳಿದಾಗ , ಪ್ರಾಣಿಹತ್ಯೇಯಾಗದ ಯಾವುದಾದರು ಆಹಾರವನ್ನು ತಿನ್ನಲ್ಲು ಬಯಸಿ ಬಂದಿರುವುದಾಗಿ ತಿಳಿಸಿದನು . ಆಗ ಮತಂಗನು ಗೋದಿಯ ಮೊರವನ್ನು ,ಭತ್ತದ ಮೊರವನ್ನು ತೋರಿಸಿದನ್ನು . ಇದರಿಂದಾಗುವ ಪ್ರಾಣಿಹಿಂಸೆಯನ್ನು ತಿಳಿದು ಅದನ್ನು ತಿರಸ್ಕರಿಸಿದನು. ಆಗ ಮತಂಗನು ಇನ್ನೂಂದು ಪದಾರ್ಥವನ್ನು ತೋರಿಸಿದನೂ ,ಅದೂ ಹಿಂದಿನ ಪದಾರ್ಥಕ್ಕಿಂತಲೂ ಹೆಚ್ಚು ಪಾಪವನ್ನುಂಟುಮಾಡುತ್ತದೆಂದು ತಿಳಿದು ವ್ಯಾಧನು ಆ ಋಷಿಯ ಮನೆಯಿಂದ ಹೊರಡಲು ತೀರ್ಮಾನಿಸಿದನು. ಮತಂಗನು ಕಾರಣವನ್ನು ಕೇಳಿದಾಗ ,ವ್ಯಾಧನು ನೀನು ಪ್ರತಿನಿತ್ಯವು ಕೋಟಿಗಟ್ಟಲೆ ಪ್ರಾಣಿಗಳನ್ನು ಕೊಲ್ಲುವಿ, ಇಂತಹ ಪಾಪಿಯ ಅನ್ನವನ್ನು ಹೇಗೆ ತಾನೆ ಊಟಮಾಡಲಿ, ನಾನಾದರೂ ಕುಟುಂಬಕ್ಕಾಗಿ ದಿನಕ್ಕೆ ಒಂದು ಮೃಗವನ್ನು ಮಾತ್ರ ಕೊಲ್ಲುವೆನು , ಅದನ್ನು ಶ್ರೀಹರಿಗೆ ಸಮರ್ಪಿಸಿ, ಪಿತೃಗಳಿಗೆ ಸಮರ್ಪಿಸಿ ಸ್ವಜನರೊಂದಿಗೆ ಊಟಮಾಡುವೆನು .ನೀನಾದರೂ ಇದಾವುದನ್ನೂ ಮಾಡದೆ ಪಾಪದ ಊಟಮಾಡುವಿ.
"ಬ್ರಹ್ಮಣಾ ತು ಪುರಾ ಸೃಷ್ಟಾ ಓಷಧ್ಯಃ ಸರ್ವವೀರುಧಃ |
ಯಜ್ಞಾರ್ಥಂ ತತ್ತು ಭೂತಾನಾಂ ಭಕ್ಷ್ಯಮಿತ್ಯೇವ ವೈ ಶ್ರುತಿಃ |
ದಿವ್ಯೋ ಭೌಮಸ್ತಥಾ ಪೈತ್ರೋ ಮಾನುಷೋ ಬ್ರಾಹ್ಮ ಎವ ಚ |
ಎತೇ ಪಂಚಮಹಾಯಜ್ಞಾ ಬ್ರಹ್ಮಣಾ ನಿರ್ಮಿತಾ ಪುರಾ |
ಎವಂ ಕೃತ್ವಾ ನರೋ ಭುಕ್ತ್ವಾ ತಸ್ಮಾದನ್ನಂ ವಿಶುಧ್ಯತಿ |
ಅನ್ಯಥಾ ವ್ರೀಹಯೋಪ್ಯೇತೇ ಎಕೈಕಂ ಮೃಗಪಕ್ಷಿಣಃ |
ಮಂತವ್ಯಾ ದಾತೃಭೋಕ್ಟೄಣಾಂ ಮಹಾಮಾಂಸಂತು ತತ್ಸ್ಮೃತಂ (ವರಾಹ ಪುರಾಣ)
'' ಶ್ರೀಹರಿಯು ಹಿಂದೆ ರಾಗಿ, ಗೋದಿ, ಭತ್ತ ಮುಂತಾದ ಆಹಾರಪದಾರ್ಥಗಳನ್ನು ಯಜ್ಞಕ್ಕಾಗಿ ನಿರ್ಮಿಸಿದ್ದಾನೆ. ಯಜ್ಞಾನಂತರದಲ್ಲಿ ಅದು ಪ್ರಾಣಿಗಳಿಗೆ ಭಕ್ಷ್ಯವಾಗುವುದು . ದೇವಯಜ್ಞ, ಭೂತಯಜ್ಞ, ಪಿತೃಯಜ್ಞ, ಮನುಷ್ಯಯಜ್ಞ, ಬ್ರಹ್ಮಯಜ್ಞ, ಎಂಬ ಐದು ವಿಧವಾದ ಯಜ್ಞಗಳನ್ನು ಸೃಷ್ಟಿಸಿದನು . ಇವುಗಳನ್ನು ಮಾಡಿದಾಗ ಮಾತ್ರ ಅನ್ನವು ಶುದ್ಧವಾಗುತ್ತದೆ. ಇಲ್ಲವಾದಲ್ಲಿ ಈ ಗೋದಿಯ ಒಂದೊಂದು ಕಾಳೂ ಮೃಗಪಕ್ಷಿಗಳಿಗೆ ಸಮಾನ ಎಂದು ತಿಳಿಯಬೇಕು. ಅದು ಊಟ ಮಾಡುವವನಿಗೂ ಮಾಡಿಸುವವನಿಗೂ ಮಹಾಮಾಂಸವಾಗುವುದು . ಹಾಗಾಗಿ ನಾನು ಪೀತೃಗಳಿಗೆ ನಿವೇದಿಸಿಯೆ ಭೋಜನವನ್ನು ಸ್ವೀಕರಿಸುತ್ತೆನೆಂದು ಮನೆಗೆ ತೆರಳುತ್ತಾ, ತನ್ನ ಮಗಳಿಗಾದ ಅವಮಾನವನ್ನು ನೆನೆದು ಹೀಗೆ ಶಪಿಸುತ್ತಾನೆ.
ಮಾ ಸ್ನುಷಾಭಿಃ ಸಮಂ ಶ್ವಶ್ರ್ವಾ ವಿಶ್ವಾಸೋ ಭವತು ಕ್ವಚಿತ್ | ಮಾ ಚ ಸ್ನುಷಾ ಕದಾಚಿತ್ ಸ್ಯಾದ್ ಯಾ ಶ್ವಶ್ರೂಂ ಜೀವತೀಮಿಷೇತ್ || (ವರಾಹಪುರಾಣ)
ಎಂದೂ ಸೊಸೆಯರೊಡನೆ ಅತ್ತೆಗೆ ವಿಶ್ವಾಸವುಂಟಾಗದಿರಲಿ . ಎಂದಿಗೂ ಸೊಸೆಯು ತನ್ನ ಅತ್ತೆಯು ಜೀವಿಸಲೆಂದು ಬಯಸದಿರಲಿ .
ಈ ಪ್ರಕರಣಣದಲ್ಲಿ ಸ್ಪಷ್ಟವಾಗಿ ಶ್ರೀಹರಿಯ ನೈವೇದ್ಯವನ್ನು ಉಲ್ಲೇಖಿಸಲ್ಲವೆಂದು ತೋರುತ್ತದೆ . ಆದರೆ ವಿಷ್ಣುತೀರ್ಥರು ಈ ಪ್ರಕರಣವನ್ನು ಸಂಗ್ರಹಿಸುತ್ತಾ 'ತದ್ದಾತವ್ಯಂ ಹರೇಃ ಸಮ್ಯಗ್ ಅನ್ಯಥಾ ಪಾಪಮಾಪ್ನುಯಾತ್' ಎಂಬ ಮಾತನ್ನು ಹೇಳುತ್ತಾರೆ . ಪಂಚಯಜ್ಞಗಳಲ್ಲಿರುವ ದೇವಯಜ್ಞವೆಂದ ವಿಷ್ಣುವಿನ ನೈವೇದ್ಯವೆ. ವ್ಯಾಧನು ಪಿತೃಯಜ್ಞವನ್ನಾಚರಿಸುತ್ತಿದ್ದನು. ಹರಿನೈವೇದ್ಯವಿಲ್ಲದೆ ಪಿತೃಯಜ್ಞವು ಸಾಧ್ಯವಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಪಿತೃಯಜ್ಞಾಂಗವಾಗಿ ವಿಷ್ಣುನೈವೆದ್ಯವೆಂದು ಆಚರಿಸುತ್ತಿದ್ದನೆಂದು ಸೊಚಿಸುವ ಮೂಲಕ ಪುರಾಣಗಳನ್ನು ಹೇಗೆ ಅರ್ಥೈಸಬೇಕೆಂದು ತಿಳಿಸೀಕೊಟ್ಟಿದ್ದಾರೆ . ಹಾಗಾಗಿ ವಿಷ್ಣುನೈವೇದ್ಯವಿಲ್ಲದ ಭೋಜನವು ಪಾಪಕಾರಕ ಎನ್ನುವ ಪ್ರಮೇಯವನ್ನು ತಿಳಿಸುವುದು ಈ ಪ್ರಕರಣದ ತಾತ್ಪರ್ಯ ಎಂದು ತಿಳಿಸುವ ಮೂಲಕ ಪುರಾಣದ ಅರ್ಥೈಸುವಿಕೆಯ ಪ್ರಕಾರವನ್ನು ತೋರಿಸಿಕೊಟ್ಟಿದ್ದಾರೆ .
Comments
Post a Comment