ಇಂಡೊಲೊಜಿ ವಿಮರ್ಶೆ -9 - ಕಾಳಿದಾಸನ್ನು ಪಾಶ್ಚಾತ್ಯರಿಗೆ ಪರಿಚಯಿಸಿದ ಬ್ರಿಟಿಷ್ ವಿದ್ವಾಂಸ
ಇಂಡೊಲೊಜಿ ವಿಮರ್ಶೆ -9 - ಕಾಳಿದಾಸನ್ನು ಪಾಶ್ಚಾತ್ಯರಿಗೆ ಪರಿಚಯಿಸಿದ ಬ್ರಿಟಿಷ್ ವಿದ್ವಾಂಸ
ಮಿಶನರಿಗಳು ಮತಾಂತರದ ಉದ್ದೇಶದಿಂದಲೆ ಭಾರತೀಯ ಸಂಸ್ಕೃತಿಯ ಹಾಗೂ ಭಾರತೀಯ ಗ್ರಂಥಗಳ ಅಧ್ಯಯನವನ್ನು ಮಾಡಿದರು ಎಂಬ ಅಂಶವನ್ನು ಕಳೆದ ಕೆಲವು ಸಂಚಿಕೆಗಳಲ್ಲಿ ಅರಿತುಕೊಂಡೆವು . ಇವರ ಜೊತೆಗೆ ಮಿಶನರಿಗಳಲ್ಲದ ಬ್ರಿಟಿಷ್ ಹಾಗೂ ಜೆರ್ಮನಿ, ಫ್ರಾನ್ಸ ಮುಂತಾದ ಇತರ ಯುರೋಪಿನ ವಿದ್ವಾಂಸರು ಭಾರತೀಯ ಗ್ರಂಥಗಳನ್ನು ಅಭ್ಯಸಿಸಿದರು . ಈ ವಿದ್ವಾಂಸರು ಭಾರತೀಯ ಸಂಸ್ಕೃತಿಯ ಮೇಲಿನ ಆಸಕ್ತಿಯಿಂದ ಭಾರತೀಯ ಗ್ರಂಥಗಳನ್ನು ಅಭ್ಯಸಿಸಿದರು. ಇವರಿಗೆ ಮಿಶನರಿಗಳಂತೆ ಮತಾಂತರ ಮುಂತಾದ ಯಾವುದೇ ಉದ್ದೇಶಗಳಿರಲಿಲ್ಲವಾದರೂ ಸಹಜವಾದ ಸ್ವಜನ್ಮಜಾತ ಕ್ರಿಶ್ಚಿಯಾನಿಟಿಯ ಪ್ರಭಾವವಿದ್ದದ್ದರಿಂದ ಅದರ ಪ್ರಭಾವವನ್ನು ಅವರ ವಿಮರ್ಶೆಗಳಲ್ಲಿ , ಗ್ರಂಥಗಳಲ್ಲಿ ಕಾಣಬಹುದಾಗಿದೆ . ಇಂತಹ ಅನೇಕ ಯುರೋಪಿನ ವಿದ್ವಾಂಸರು ಭಾರತದ ಅಧ್ಯಯನವನ್ನು ಮಾಡಿದ್ದಾರೆ . ಅವರಲ್ಲಿ ಪ್ರಮುಖರನ್ನು ಮುಂದಿನ ಕೆಲವು ಸಂಚಿಕೆಗಳಲ್ಲಿ ಗಮನಿಸೋಣ .
ಸರ್ ವಿಲಿಯಮ್ ಜೋನ್ಸ್ (Sir William Jones 1746-1794)
ವಿಲಿಯಮ್ ಜೋನ್ಸ್ ಲಂಡನ್ ನಲ್ಲಿ ಜನಿಸಿದ. ಚಿಕ್ಕ ವಯಸ್ಸಿನಲ್ಲಿಯೆ ಭಾಷೆಗಳ ಬಗ್ಗೆ ಆಸಕ್ತಿಯನ್ನು ಬೆಳಿಸಿಕೊಂಡು ಗ್ರೀಕ್,ಲ್ಯಾಟಿನ್, ಪರ್ಷಿಯನ್, ಅರೆಬಿಕ್, ಹಿಬ್ರೂ, ಮುಂತಾದ ಎಂಟು ಭಾಷೆಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಸಂಪಾದಿಸಿದ. ಆಕ್ಸ್ವರ್ಡ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಗಳಿಸಿದ ಮೇಲೆ ಮಿಡಲ್ ಟೆಂಪಲ್ ಎಂಬ ಸಂಸ್ಥೆಯಲ್ಲಿ ಕಾನೂನಿನ ಪದವಿಯನ್ನು ಗಳಿಸಿದ . ಆಗ ಭಾರತದಲ್ಲಿ ವಾರನ್ ಹೆಸ್ಟಿಂಗ್ಸ್ ಎಂಬ ಬ್ರಿಟಿಷ್ ಅಧಿಕಾರಿ ಗವರ್ನರ್ ಜನರಲ್ ಆಗಿ ಕಾರ್ಯ ನಿರ್ವಹಿಸುತಿದ್ದನು. ಈಸ್ಟ್ ಇಂಡಿಯಾ ಕಂಪನಿಯವರು ಭಾರತದಲ್ಲಿ ಪರಿಪೂರ್ಣ ಆಡಳಿತವನ್ನು ನಡೆಸುವ ದೃಷ್ಟಿಯಿಂದ ಸುಪ್ರೀಂ ಕೋರ್ಟನ್ನು ಸ್ಥಾಪಿಸಿದ್ದರು . ಭಾರತದಲ್ಲಿ ಸ್ಥಳೀಯ ನಿಯಮಗಳಿಗನುಗುಣವಾಗಿಯೆ ಆಡಳಿತವನ್ನು ನಡೆಸುತ್ತೇವೆಂದು ಬಿಂಬಿಸಿ ಜನರ ವಿಶ್ವಾಸವನ್ನು ಗಳಿಸಲು ಪ್ರಯತ್ನವು ನಡೆದಿತ್ತು. ಅದರ ಅಂಗವಾಗಿ ಮನುಸ್ಮೃತಿಯ ಆಧಾರದ ಮೇಲೆ ಕಾನೂನನ್ನು (codification of hindoo laws) ರೂಪಿಸುವ ಪ್ರಯತ್ನವಾಗಿತ್ತು . ವಿಲಿಯಮ್ಸ್ ನ ಆಕ್ಸಫರ್ಡ ವಿಶ್ವವಿದ್ಯಾಲಯದ ಮಿತ್ರ ನಾಥನೈಲ್ ಬ್ರಾಸಿ ಹಾಲ್ಹೆಡ್( Nathaniel Brassey Halhed) The code of Gentoo Laws Or Ordinations of pundits ಎಂಬುವ ಪುಸ್ತಕವನ್ನು 1776 ರಲ್ಲಿ ರಚಿಸಿದನು . ಇದು 'ವಿವಾದಾರ್ಣವಸೇತು' ಎಂಬ ಸಂಸ್ಕೃತ ಗ್ರಂಥದ ಪರ್ಷಿಯನ್ ಅನುವಾದದ ಆಂಗ್ಲಾನುವಾದವಾಗಿತ್ತು. ಇದು ಬ್ರಿಟಿಷ್ ರಿಂದ ಪ್ರೇರಿತವಾದ, ಸಂಸ್ಕೃತಗ್ರಂಥಗಳ ಆಧಾರಿತವಾದ, ಕಾನೂನುಗಳ ನಿರ್ಮಾಣದ ಮೊದಲ ಪ್ರಯತ್ನವಾಗಿತ್ತು. ವಾರನ್ ಹೆಸ್ಟಿಂಗ್ಸ್ ಹನ್ನೋಂದು ಪಂಡಿತರನ್ನು ಈ ಕಾರ್ಯಕ್ಕಾಗಿ ನಿಯೋಜಿಸಿದನು. ಅವರು ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಅನುವಾದಿಸಿದರು. ಪರ್ಷಿಯನ್ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಹಲ್ಹೆಡ್ ನು ಅನುವಾದಿಸಿದನು. ಇಂಗ್ಲ್ಯಾಂಡಿನಲ್ಲಿ ಈ ಪ್ರಯತ್ನಕ್ಕೆ ಬಹಳ ಮೆಚ್ಚುಗೆ ಸಿಕ್ಕಿತಾದರೂ ,ಭಾರತದಲ್ಲಿ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಅದೇ ಸಮಯದಲ್ಲಿ ವಾರನ್ ಹೆಸ್ಟಿಂಗ್ಸ್ ನು ವಿಲಿಯಮ್ಸ್ ನನ್ನು 1783 ರಲ್ಲಿ ಕಲ್ಕತ್ತಾದ ಸುಪ್ರೀಂ ಕೋರ್ಟನಲ್ಲಿ ನ್ಯಾಯಾಧೀಶನನ್ನಾಗಿ ನಿಯುಕ್ತಿಗೊಳಿದನು . ಸೆಪ್ಟಂಬರ್ 25 ,1783 ರಲ್ಲಿ ಕಲ್ಕತ್ತಾಗೆ ಬಂದಿಳಿದ ವಿಲಿಯಮ್ಸ್ ನು ತಾನೆ ಖುದ್ದಾಗಿ ಮನುಸ್ಮೃತಿಯ ಅನುವಾದ ಮಾಡಿ ಹಿಂದೂ ಕಾನೂನನ್ನು ರಚಿಸಲು ತಿರ್ಮಾನಿಸಿದನು. ಇದಕ್ಕಾಗಿ ಸಂಸ್ಕೃತವನ್ನು ಅಭ್ಯಸಿಸಲು ತಿರ್ಮಾನಿಸಿದ. ಅದರ ಅಂಗವಾಗಿ 1784 ರಲ್ಲಿ ಎಷಿಯಾಟಿಕ್ ಸೋಸಾಯಿಟಿ (The Asiatic society) ಎಂಬ ಸಂಸ್ತ್ಱೆಯನ್ನು ಸ್ಥಾಪಿಸಿದ . ಬಂಗಾಳದ ಕೃಷ್ಣಾನಗರದಲ್ಲಿದ್ದ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ವಾಂಸನಾಗಿದ್ದ ರಾಮಲೋಚನ ಎಂಬುವವರ ಬಳಿ 1785 ರಲ್ಲಿ ಸಂಸ್ಕೃತದ ಅಧ್ಯಯನವನ್ನು ಪ್ರಾರಂಭಿಸಿದ . ಅದು ಆ ಕಾಲದ ಅತ್ಯಂತ ಪ್ರಸಿದ್ಧವಾದ ಸಂಸ್ಕೃತ ಕಲಿಕಾ ಕೇಂದ್ರವಾಗಿತ್ತು . ವಿಲಿಯಮ್ಸ್ ನು ಗಂಗಾನದಿಯ ದಡದಲ್ಲಿ ಬಂಗಲೆಯಲ್ಲಿ ವಾಸಿಸತೊಡಗಿದನು. ಅವನ ಗುರುಗಳು ಷರತ್ತಿನ ಮೆರೆಗೆ ಪಾಠಮಾಡಲು ಒಪ್ಪಿದರು. ಒಂದು ಪ್ರತ್ಯೇಕ ಕೊಠಡಿಯಲ್ಲಿ ಪಾಠ, ಪಾಠದ ಕೊಠಡಿಯನ್ನು ಪ್ರತಿನಿತ್ಯ ಗಂಗಾ ನದಿಯ ನೀರಿನಿಂದ ಶುದ್ಧಿಗೊಳಿಸಬೇಕು ಇತ್ಯಾದಿ. ಅದೆಲ್ಲವನ್ನು ಆದರದಿಂದ ಒಪ್ಪಿ ಸಂಸ್ಕೃತ ಅಧ್ಯಯನವನ್ನು ಪ್ರಾರಂಭಿಸಿದನು . ಒಂದು ವರ್ಷದ ಕಾಲದಲ್ಲಿಯೆ ಮನುಸ್ಮೃತಿಗ್ರಂಥದ ವಿಷಯಗಳಲ್ಲಿ ತಾನು ಪ್ರಾವೀಣ್ಯವನ್ನು ಸಂಪಾದಿಸಿರುವುದಾಗಿ ಘೋಷಿಸಿಕೊಂಡ. ಆದರೆ ಅವನ ಈ ಪುಸ್ತಕ institute of hindu law or the Ordinances of Menu ಎನ್ನುವ ಹೆಸರಿನಲ್ಲಿ ಅವನ ಮರಣದ ನಂತರ 1796 ರಲ್ಲಿ ಪ್ರಕಟಗೊಂಡಿತು . ವಿಲಿಯಮ್ಸ್ ನು ಇದನ್ನು ಕುಲ್ಲಕಭಟ್ಟನ ಟೀಕೆಯ ಅನುಗುಣವಾಗಿ ಅನುವಾದಿಸಿದ. ಅವನು ಹಿಂದೂ ಕಾನೂನುಗಳನಷ್ಟೆ ಅಲ್ಲದೆ ಮುಸ್ಲಿಮ್ ಕಾನೂನುಗಳನ್ನು ಸಂಗ್ರಹಿಸಿ ಪುಸ್ತಕವನ್ನು ರಚಿಸಿದ . ಇವುಗಳೆ ಮುಂದೆ ಕೊರ್ಟಗಳಲ್ಲಿ ನ್ಯಾಯಪ್ರಕ್ರಿಯೆಯಲ್ಲಿ ಬಳಸಲ್ಪಟ್ಟವು. ಆಕ್ಸಫರ್ಡ್ ವಿಶ್ವವಿದ್ಯಾಲಯದ ಚಾಪಲ್ ನಲ್ಲಿ ವಿಲಿಯಮ್ ಜೊನ್ಸ್ ನ ಒಂದು ಸ್ಮರಣಿಕೆಯನ್ನು ನಿರ್ಮಿಸಿದ್ದಾರೆ. ಮೇಲಿರುವ ಚಿತ್ರದಲ್ಲಿ ವಿಲಿಯಮ್ಸ್ ಜೋನ್ಸ್ ನು ತಾನು ಮೇಲೆ ಕುಳಿತುಕೊಂಡು ಪಂಡಿತರ ಜೊತೆ ಸಮಾಲೋಚಿಸುತ್ತಿರುವುದನ್ನು ಕಾಣಬಹುದು .
ಅದರ ಕೆಳಗಿನ ವಾಕ್ಯವನ್ನು ಗಮನಿಸಿ – He formed A Digest of hindus and Mohammedan Laws – ಅಂದರೆ ವಿಲಿಯಮ್ಸ್ ನು ಹಿಂದೂ ಹಾಗೂ ಇಸ್ಲಾಮ್ ಕಾನೂನಿನ ಸಂಗ್ರಹವನ್ನು ರಚಿಸಿದನು ಎಂದು ಅಭಿಪ್ರಾಯ ಬರುತ್ತದೆ . ಇದೇ ಅಭಿಪ್ರಾಯದಲ್ಲಿ ಜೊನ್ಸ್ ನು ತನ್ನನ್ನು ತಾನು 'Justinian of india ' ಎಂದು ಕರೆದುಕೊಂಡ. ಜಸ್ಟಿನಿಯನ್ ಎಂಬ ರಾಜ ರೋಮ್ ಸಾಮ್ರಾಜ್ಯದ ಕಾನೂನುಗಳ ಸಂಗ್ರಹಿಸಿ ಸುವ್ಯವಸ್ಥಿತಗೊಳಿಸಿ ಅವುಗಳನ್ನು ರಾಜ್ಯದಲ್ಲಿ ಅನ್ವಯಿಸಿದ. ಅದು ಮುಂದಿನ ಅಧುನಿಕ ಸಂವಿಧಾನಗಳಿಗೆ ಅಡಿಪಾಯವಾಯಿತು. ಅದೇ ರೀತಿಯಾಗಿ ತಾನು ಮಾಡಿದ ಕೆಲಸಕ್ಕಾಗಿ ತನ್ನನ್ನು ಜಸ್ಟಿನಿಯನ್ ಗೆ ಹೊಲಿಸಿಕೊಂಡ. ಆದರೆ ಅವನು ಮಾಡಿದ್ದು ಅನುವಾದದ ಕೆಲಸವನ್ನು ಮಾತ್ರವೆ ಹೊರತು ಕಾನೂನುಗಳನ್ನು ಮಾಡಿ ಕೊಟ್ಟಿದ್ದಲ್ಲ. ಅಥವಾ ಕಾನೂನುಗಳನ್ನು ಸುವ್ಯವಸ್ಥಿತಕರಣಗೊಳಿಸಿದ್ದಾನೆಂಬುವುದಕ್ಕೆ ಯಾವುದೆ ಆಧಾರವಿಲ್ಲ. ಭಾರತದಲ್ಲಿ ಧರ್ಮಶಾಸ್ತ್ರಗಳ ಅನೇಕ ಸಂಗ್ರಹ ಗ್ರಂಥಗಳು ಹೇರಳವಾಗಿ ದೊರೆಯುತ್ತಿದ್ದವು. ಆಂಗ್ಲಭಾಷೆಯ ಅನುವಾದ ಹೊರತಾದ ಯಾವ ಕೊಡುಗೆಯು ಅವನಿಂದ ನಡೆದಿಲ್ಲ. ಆದರೆ ಚಿತ್ರವನ್ನು ನೋಡಿದರೆ ಹಿಂದೂ ಕಾನೂನಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೆ ವಿಲಿಯಮ್ಸ್ ಎನ್ನುವಂತೆ ಬಿಂಬಿಸಿದ್ದಾರೆ .
ಆದರೆ ಮನುಸ್ಮೃತಿಯ ಆಂಗ್ಲ ಭಾಷೆಯ ಅನುವಾದದಿಂದ ಪಾಶ್ಚಾತ್ಯರಿಗೆ ಭಾರತೀಯ ಸಾಹಿತ್ಯದ ಪರಿಚಯವಾಗತೊಡಗಿತು . ವಿಲಿಯಮ್ಸನು ಕಾಲಿದಾಸನ ಅಭಿಜ್ಞಾನಶಾಕುಂತಲ ನಾಟಕದ ಆಂಗ್ಲಭಾಷೆಯ ಅನುವಾದ ಮಾಡಿದ್ದರಿಂದಲೆ ಪಾಶ್ಚಾತ್ಯರಿಗೆ ಭಾರತೀಯ ಕಾವ್ಯಗಳ ಸೌಂದರ್ಯದ ಪರಿಚಯವಾಗತೊಡಗಿತು . 1789 ರಲ್ಲಿ ವಿಲಿಯಮ್ ಜೋನ್ಸ್ ನು ಅಭಿಜ್ಞಾನ ಶಾಕುಂತಲದ ಇಂಗ್ಲೀಷ್ ಅನುವಾದವನ್ನು ಮಾಡಿ ಪ್ರಕಟಿಸಿದನು. ಇಂಗ್ಲೀಷ್ ಅನುವಾದವನ್ನು ಜೊರ್ಜ್ ಫೋರ್ಸ್ಟರ್ ಎಂಬುವವನು ಜರ್ಮನ್ ಭಾಷೆಗೆ ಅನುವಾದಿಸಿದ. ಈ ಅನುವಾದವು ಆ ಕಾಲದ ಪ್ರಸಿದ್ದ್ಧ ಜರ್ಮನ್ ಕವಿಯಾದ ಜೊಹನ್ ಗೋಥೇ ( JohannW Goethe) ಗಮನಕ್ಕೆ ಬಂದಿತು. ಶಕುಂತಲಾ ಪಾತ್ರದ ಪ್ರೌಢತೆಯನ್ನು ಕಂಡು ಆಶ್ಚರ್ಯಚಕಿತನಾದನು. ಗೋಥೆಯ ಉದ್ಗಾರ ಹೀಗಿತ್ತು -
Wouldst thou the young year's blossoms and the fruits of its decline.
And all by which the soul is charmed, enraptured, feasted, fed,
Wouldst thou the earth and heaven itself in one sole name combine?
I name thee, O Sakuntala! and all at once is said.
ವಸಂತಕಾಲದ ಕುಸುಮಗಳನ್ನು, ಗೀಷ್ಮದ ಫಲಗಳನ್ನು, ಆತ್ಮವನ್ನು ಮೋಹಗೊಳಿಸುವ, ಆನಂದಗೊಳಿಸುವ ಪೋಷಿಸುವ , ಭೂಮಿಯನ್ನು ಸ್ವರ್ಗವನ್ನು ಒಗ್ಗೂಡಿಸುವ ಒಂದು ಹೆಸರನ್ನು ಕೇಳಬಯಸುವಿಯಾದರೆ , ಅದೇ ಶಾಕುಂತಲ ಎಂಬ ನಾಮಧೆಯವು .
ಇದೇ ರೀತಿಯಾಗಿ ಕಾಳಿದಾಸನ ಋತುಸಂಹಾರ ಹಾಗೂ ಜಯದೇವನ ಗೀತಗೋವಿಂದವನ್ನು ಆಂಗ್ಲಭಾಷೆಗೆ ಅನುವಾದಿಸಿದನು. ವಿಲಿಯಮ್ ಜೋನ್ಸ್ ನು ಸಂಸ್ಕೃತ ಭಾಷೆಯ ಸೌಂದರ್ಯ ಹಾಗೂ ಅಗಾಧತೆಗೆ ಮನಸೋತಿದ್ದನು . ಅವನ ಸಂಸ್ಕೃತದ ಕುರಿತಾ಼ದ ಅಭಿಮಾನ ಅವನ ಮಾತಿನಲ್ಲಿ ಗೋಚರಿಸುತ್ತದೆ . The Sanskrit language, whatever be its antiquity, is of a wonderful structure; more perfect than the Greek, more copious than the Latin, and more exquisitely refined than either. (ಸಂಸ್ಕೃತ ಭಾಷೆಯ ಪ್ರಾಚೀನತೆಯ ಬಗ್ಗೆ ಏನೆ ಚರ್ಚೆ ಇರಲಿ, ಅದರ ರಚನೆಯು ಅದ್ಭುತವಾಗಿದೆ. ಇದು ಗ್ರೀಕ್ ಭಾಷೆಗಿಂತ ಪರಿಪೂರ್ಣ,ಲ್ಯಾಟಿನ್ ಭಾಷೆಗಿಂತ ಹೆಚ್ಚಿನ ಶಬ್ದಸಂಪತ್ತಿನಿಂದ ಕೂಡಿದೆ. ಇವೆರಡೂ ಭಾಷೆಗಿಂತಲೂ ಪರಿಪಕ್ವವಾಗಿದೆ.) ಆ ಕಾಲದಲ್ಲಿ ಈ ರೀತಿಯಾಗಿ ಹೇಳಿಕೆ ಕೊಡುವುದು ಸಾಹಸ ಕೆಲಸವೆ ಆಗಿತ್ತು. ಆಗಿನ ಕಾಲದಲ್ಲಿ ಎರಡು ರೀತಿಯ ಅಭಿಪ್ರಾಯಗಳಿದ್ದ ಗುಂಪುಗಳಿದ್ದವು . ಒಂದು ಗುಂಪು ಭಾರತೀಯವಾದದ್ದರಲ್ಲಿ ಯಾವುದೆ ಹುರುಳಿಲ್ಲ, ಕೇವಲ ಮೂಢನಂಬಿಕೆ, ಅವೈಜ್ಞಾನಿಕತೆಯೆ ತುಂಬಿಕೊಂಡಿರುವ ಸಂಸ್ಕೃತಿ ಎಂದು ಭಾರತವನ್ನು ಬಿಂಬಿಸುತಿತ್ತು. ಇನ್ನೊಂದು ಗುಂಪು ಸ್ವಲ್ಪ ಸಹಿಷ್ಣುವಾಗಿದ್ದು ಭಾರತೀಯವಾದದ್ದರಲ್ಲಿ ಗುಣಗಳನ್ನು ಕಂಡು ಜಗತ್ತಿಗೆ ತಿಳಿಸುವ ಕಾರ್ಯವನ್ನು ಮಾಡುತ್ತಿತ್ತು . ಅವೆರಡರಲ್ಲಿ ವಿಲಿಯಮ್ಸನು ಎರಡನೆಯ ಗುಂಪಿಗೆ ಸೇರಿದವನು . ಆದರೂ ಅವನಿಗೆ ಕ್ರಿಶ್ಚಿಯಾನಿಟಿಯ ಪ್ರಭಾವವನ್ನು ಮೀರಲಾಗಲಿಲ್ಲ. ವಿಲಿಯಮ್ಸನ್ ಜೀವನ ಚರಿತ್ರೆಯನ್ನು ಬರೆದ ಫ್ರಾಂಕ್ಲಿನ್ ಅವನ ಜೀವನದ ದ್ವಂದ್ವಭಾವವನ್ನು ಆವಿಷ್ಕರಿಸಿದ್ದಾನೆ. ಒಂದು ಕಡೆ ಅವನು ಆಗ ಬ್ರಿಟನ್ ನಲ್ಲಿ ನಡೆಯುತ್ತಿದ್ದ ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಮೇರಿಕದ ಪರ ವಕಾಲತ್ತು ವಹಿಸಿದ್ದ. ವಸಾಹಾತುಶಾಷಿಯ ವಿರುದ್ಧ ಧ್ವನಿ ಎತ್ತಿದ್ದ. ಆದರೆ ಅದೆ ಸಮಯದಲ್ಲಿ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯನ್ನು ಸಮರ್ಥಿಸುತ್ತಿದ್ದ. ಈ ದ್ವಂದ್ವದಿಂದ ಹೊರ ಬರಲು ಅವನು ಬ್ರಿಟಿಷರು ಭಾರತವನ್ನು ಭಾರತೀಯ ನಿಯಮಗಳಿಗಣುಗುಣವಾಗಿಯೆ ಆಳ್ವಿಕೆ ನಡೆಸುತ್ತಿರುವುದು , ಹೊರತು ದಬ್ಬಾಳಿಕೆಯಲ್ಲ ಎಂಬ ಸಮಜಾಯಿಷಿಯನ್ನು ಕಂಡುಕೊಂಡ .ಇದೇ ಅಭಿಪ್ರಾಯದಿಂದ ಅವನು ತನ್ನ ಮನುಸ್ಮೃತಿಯ ಮುನ್ನುಡಿಯಲ್ಲಿ ಹೀಗೆ ದಾಖಲಿಸುತ್ತಾನೆ –
Whatever opinion in short may be formed of MENU and his laws, in a country happily enlightened by found philosophy and the only true revelation, it must be remembered, that those laws are actually revered, as the word of the Most High, by nations of great importance to the political and commercial interests of Europe, and particularly by many millions of Hindu subjects, whose well directed industry would add largely to the wealth of Britain, and who ask no more in return than protection for their persons and places of abode, justice in their temporal concerns, indulgence to the prejudices of their old religion, and the benefit of those laws, which they have been taught to believe farced, and which alone they can possibly comprehend.
ಮನು ಮತ್ತು ಅವರ ಕಾನೂನುಗಳ ಬಗ್ಗೆ ಯಾವೇ ಅಭಿಪ್ರಾಯವಿದ್ದರೂ, ಈ ಕಾನೂನುಗಳು ಭಾರತದಲ್ಲಿರುವ ಅನೇಕ ಜನಾಂಗಗಳಿಗಾಗಿ ಅತ್ಯಂತ ಪವಿತ್ರವಾಗಿರುವುದನ್ನು ನೆನಪಿಡಬೇಕು. ಈ ಜನಾಂಗಗಳು ಯುರೋಪಿನ ರಾಜಕೀಯ ಮತ್ತು ವಾಣಿಜ್ಯ ಹಿತಗಳಿಗೂ ಮಹತ್ತರವಾಗಿದೆ, ವಿಶೇಷವಾಗಿ ಬ್ರಿಟಿಷ್ ಆಡಳಿತದಲ್ಲಿರುವ ಕೋಟಿ ಕೋಟಿ ಹಿಂದೂ ಪ್ರಜೆಗಳಿಗೆ. ಅವರು ತಮ್ಮ ಶ್ರಮದ ಮೂಲಕ ಬ್ರಿಟನ್ಗೂ ಅಪಾರ ಸಂಪತ್ತನ್ನು ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಅವರ ಬಯಕೆ ಇದಷ್ಟೇ – ಅವರ ಜೀವ ಮತ್ತು ಪವಿತ್ರಕ್ಷೇತ್ರಗಳ ರಕ್ಷಣೆ, ನ್ಯಾಯಯುತ ಆಡಳಿತ, ಅವರ ಪುರಾತನ ಧರ್ಮದ ಆಚರಣೆಗಳಿಗೆ ಸಹಾನುಭೂತಿ ಮತ್ತು ಅವರು ಪವಿತ್ರವೆಂದು ನಂಬಿರುವ ಹಾಗೂ ಅವರಿಗೆ ಅರ್ಥವಾಗುವ ಕಾನೂನುಗಳ ಅನುಮೋದನೆ.
ಇದು ಅವನು ತನ್ನ ರಾಜಕೀಯ ದ್ವಂದ್ವಕ್ಕೆ ಕಂಡುಕೊಂಡ ಉತ್ತರ . ಅದೇ ರೀತಿ ಅವನ ಧಾರ್ಮಿಕ ದ್ವಂದ್ವತೆಯು ತೊಡಕಾಗಿತ್ತು . ಒಂದು ಕಡೆ ಸಂಸ್ಕೃತ ಸಾಹಿತ್ಯದಲ್ಲಿ ಪ್ರೀತಿ , ಇನ್ನೊಂಡೆಗೆ ತನ್ನ ಜನ್ಮ ಜಾತ ರಿಲಿಜಿಯನ್ ನಲ್ಲಿ ಶ್ರದ್ಧೆ. ಇವೆರಡರ ಸಮನ್ವಕ್ಕಾಗಿ ಅವನ್ನು ಹಿಂದೂ ಧರ್ಮದ ಎಲ್ಲಾ ಅಂಶಗಳನ್ನು ಬೈಬಲ್ ನಲ್ಲಿ ವರ್ಣಿಸಿದ ಘಟನಾವಳಿಗೆ ತಕ್ಕಂತೆ ಹೊಂದಿಸಿದನು . ತನ್ನ ಧಾರ್ಮಿಕ ದ್ವಂದ್ವವನ್ನು ಅವನು ಹೀಗೆ ಪರಿಹರಿಸಿಕೊಂಡನು. ಇದನ್ನು ನಾವು ಅವನ On the chronology of the hindus (the works of Sir William jones vol-1,p-291) ಎಂಬ ಲೇಖನದಲ್ಲಿ ಗಮನಿಸಿಬಹುದು . ಜ್ಯೋತಿಷ್ಯ ಶಾಸ್ತ್ರದಲ್ಲೂ ಅಪಾರವಾದ ಪಾಂಡಿತ್ಯವನ್ನುಗಳಿಸಿದ್ದನು . ಕೇವಲ ನಲವತ್ತೆಂಟನೆಯ ವಯಸ್ಸಿನಲ್ಲಿಯೆ 1794 ರಲ್ಲಿ ಮರಣವನ್ನಪ್ಪಿದ . ಇವನು ವೆಸ್ಟರ್ನ ಇಂಡೊಲೊಜಿಯ ಪ್ರವರ್ತಕ . ಒಳ್ಳೆಯ ಸಂಸ್ಕೃತಜ್ಞ. ಮುಂದಿನ ಅನೇಕ ಪಿಳಿಗೆಗಳಿಗೆ ಸಂಸ್ಕೃತ ಅಧ್ಯಯನದಲ್ಲಿ ತನ್ನ ಪ್ರಭಾವವನ್ನು ಮೂಡಿಸಿದ . ಅವನು ಸ್ಥಾಪಿಸಿದ ಎಷಿಯಾಟಿಕ್ ಸೊಸಾಯಿಟಿ ಎಂಬ ಸಂಸ್ಥೆಯು ಎರಡು ಶತಮಾನಗಳಲ್ಲಿ ಅನೇಕ ಸಂಸ್ಕೃತ ಪುಸ್ತಕಗಳನ್ನು ಪ್ರಕಾಶಿಸಿದೆ. ಯುರೋಪಿನವರು ಭಾರತೀಯವಾದದ್ದೆಲ್ಲವನ್ನು ತುಚ್ಛವಾಗಿ ನೋಡುತ್ತಿದ್ದ ಕಾಲದಲ್ಲಿ ಅವರು ಭಾರತೀಯವಾದದ್ದನ್ನು ಸಕಾರಾತ್ಮಕವಾಗಿ ಸ್ವೀಕರಿಸಲು ತನ್ನ ನಂಬಿಕೆ, ಪಾಂಡಿತ್ಯ, ಕಾಲದ ಅನಿವಾರ್ಯತೆ ಮುಂತಾದ ಇತಿಮಿತಿಗಳಲ್ಲಿ ಪ್ರಯತ್ನ ಮಾಡಿದವನೆಂದು ಅವನ ಜೀವನ ಹಾಗೂ ಅವನ ಗ್ರಂಥ ರಚನೆ ಮುಂತಾದ ಕಾರ್ಯಗಳ ಸಾರರೂಪದಲ್ಲಿ ಸಮೀಕರಿಸಬಹುದು.
ಗ್ರಂಥ ಋಣ
1.Early indologist a study in motivation –part-1
Autor –Swamy B.V.Giri
2. The Battle for Sanskrit
Author- Rajiv Malhotra
3. Institute of hindu law or the Ordinances of Menu
Author- Sir William Jones
4.The works of Sir William Jones
5. Sir William jones and Western indology
Author – Dr Vishwanath Prasad varma
Comments
Post a Comment