ಕಾರ್ತವೀರ್ಯಾರ್ಜುನ - ಪ್ರಜಾಪ್ರಭುತ್ವಕ್ಕೆ ರಾಜಪ್ರಭುತ್ವದ ಸಂದೇಶ



ಕಾರ್ತವೀರ್ಯಾರ್ಜುನ - ಪ್ರಜಾಪ್ರಭುತ್ವಕ್ಕೆ ರಾಜಪ್ರಭುತ್ವದ ಸಂದೇಶ

ಸಾಮಾನ್ಯವಾಗಿ ಪ್ರಜಾಪ್ರಭುತ್ವವವೆಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವೆ ಇರುವ ವ್ಯವಸ್ಥೆ. ಪ್ರಜೆಗಳೆ ಇಲ್ಲಿ ಪ್ರಭುಗಳು ಎನ್ನುವ ನಂಬಿಕೆ. ಹಾಗೆಯೆ ಪ್ರಜಾಪ್ರಭುತ್ವವಾದಿಗಳು ರಾಜಪ್ರಭುತ್ವವನ್ನು ಟೀಕಿಸಿ ಮಾತನಾಡುವುದುಂಟು . ರಾಜನ ಮಗನೆ ರಾಜನಾಗಬೇಕು, ಮತ್ಯಾರಿಗೂ ಅವಕಾಶಕಲ್ಪಿಸದ ವ್ಯವಸ್ಥೆ. ರಾಜರು ಸ್ತ್ರೀಲೋಲುಪರು, ಐಷಾರಾಮಿಗಳು, ವಿಲಾಸಿಜೀವಿಗಳಾಗಿದ್ದರು , ಪ್ರಜೆಗಳ ಕಷ್ಟಗಳಿಗೆ ಯಾವುದೆ ಸ್ಪಂದನೆಯಿಲ್ಲದ ವ್ಯವಸ್ಥೆ. ಇವೆ ಮೊದಲಾದ ಟೀಕೆಗಳನ್ನು ರಾಜಪ್ರಭುತ್ವದ ವಿಷಯದಲ್ಲಿ ಕೇಳುತ್ತೆವೆ. ಇದು ವಾಸ್ತವಿಕವೆ ? ರಾಜಪ್ರಭುತ್ವವು ಈಗ ಪ್ರಸಕ್ತವಲ್ಲದಿರಬಹುದು, ಆದರೆ ಆ ರಾಜಪ್ರಭುತ್ವವಿದ್ದ ಕಾಲದಲ್ಲಿ ಆಡಳಿತ ವ್ಯವಸ್ಥೆಯೆಲ್ಲವೂ ಇವರೆಲ್ಲ ಆರೋಪಿಸುವ ದೋಷಗಳಿಂದಲೆ ಕೂಡಿತ್ತೆ . ರಾಜರಲ್ಲಿ ನೈತಿಕತೆಯೆ ಇರಲಿಲ್ಲವೆ ? ರಾಜನಿಗೆ ಸಾಮನ್ಯ ಪ್ರಜೆಯ ಕುರಿತು ಕಾಳಜಿಯೆ ಇರಲಿಲ್ಲವೆ ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ . ಇದಕ್ಕ್ಕೆಲ್ಲಾ ಉತ್ತರವನ್ನು ಕಂಡುಕೊಳ್ಳಲ್ಲು ಕಾರ್ತವೀರ್ಯಾರ್ಜುನನ ಚರಿತ್ರೆಯನ್ನು ಅಭ್ಯಸಿಸಬೇಕು .

ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ ಧರ್ಮಶೀಲ , ಪರಾಕ್ರಮೀ ಕ್ಷತ್ರಿಯ . ತಂದೆಯು ಸ್ವರ್ಗಸ್ಥನಾದ ಮೇಲೆ ಮಂತ್ರಿಗಳು ಹಾಗೂ ಪುರೋಹಿತರು ಪಟ್ಟಾಭ್ಹಿಷೇಕಕ್ಕೆ ತಯಾರಾಗಿ ರಾಜನಾಗುವಂತೆ ಪ್ರಾರ್ಥಿಸಿದರು . ಅವರಷ್ಟೆ ಅಲ್ಲದೆ ಪೌರಜನರೆಲ್ಲರೂ ಅವನನ್ನು ರಾಜನಾಗುವಂತೆ ಕೇಳಿಕೊಂಡರು . ಆದರೆ ಕಾರ್ತವೀರ್ಯಾರ್ಜುನನು ಮಾತ್ರ ಅವರೆಲ್ಲ ಪ್ರಾರ್ಥನೆಯನ್ನು ನಯವಾಗಿ ನಿರಾಕರಿಸಿದನು . ಅವನು ಹೇಳುವ ಕಾರಣಗಳು ಇಂದಿನ ಪ್ರಜಾಪ್ರಭುತ್ವಕ್ಕೆ ದೊಡ್ಡ ಸಂದೇಶ.

ನಾಹಂ ರಾಜ್ಯಂ ಕರಿಷ್ಯಾಮಿ ಮಂತ್ರಿಣೋ ನರಕೋತ್ತರಮ್ | ಯದರ್ಥ೦ ಗೃಹ್ಯತೇ ಶುಲ್ಕಂ ತದನಿಷ್ಪಾದಯನ್ ವೃಥಾ |

ಪಣ್ಯಾನಾಂ ದ್ವಾದಶಂ ಭಾಗಂ ಭೂಪಾಲಾಯ ವಣಿಗ್ಜನಾಃ | ದತ್ವಾತ್ಮರಕ್ಷಿಭಿರ್ಮಾರ್ಗೆ ರಕ್ಷಿತೋ ಯಾತಿ ದಸ್ಯುತಃ | 

ಗೋಪಾಶ್ಚ ಘೃತತಕ್ರಾದೇಃ ಷಡಂಗಂ ಚ ಕೃಷಿವಲಾಃ | ದತ್ವಾನ್ಯದ್ಭೂಭುಜೇ ದದ್ಯುರ್ಯದಿ ಭಾಗಂ ತತೋಧಿಕಮ್ | ಪಣ್ಯಾದೀನಾಮಶೇಷಾಣಾಂ ವಣಿಜೋ ಗೃಹ್ಣತಸ್ತತಃ ॥ (ಮಾ.ಪು -16-124)

 ನರಕದ ಭೋಗವನ್ನು ಕೊಡುವ ರಾಜ್ಯಭಾರವನ್ನು ನಾನು ಮಾಡುವುದಿಲ್ಲ. ವರ್ತಕರು ವ್ಯಾಪಾರಮಾಡುವ ವಸ್ತುಗಳಲ್ಲಿ ಹನ್ನೆರಡನೆಯ ಒಂದು ಭಾಗವನ್ನು ರಾಜನಿಗೆ ಶುಲ್ಕ ರೂಪದಲ್ಲಿ ಕೊಡುವರು. ಹಾಗೆ ಗೊಲ್ಲರು ತುಪ್ಪ-ಮಜ್ಜಿಗೆಗಳಲ್ಲಿಯೂ ಕೃಷಿಮಾಡುವ ಜನರು ಬೆಳೆದ ವಸ್ತುಗಳಲ್ಲಿಯೂ ಆರನೆಯ ಒಂದು ಭಾಗವನ್ನು ಶುಲ್ಕವಾಗಿ ಕೊಡುವರು.   ಅದು ರಾಜ್ಯದ ಅಭಿವೃದ್ಧಿಗಾಗಿ , ಪ್ರಜೆಗಳು ಹಾಗೂ ವ್ಯಾಪಾರ ಮಾಡುವ ವ್ಯಾಪಾರಿಗಳು ಕಳ್ಳಕಾಕರ ಭಯವಿಲ್ಲದೆ ಒಡಾಡುವ ವಾತಾವರಣದ ನಿರ್ಮಾಣಕ್ಕಾಗಿ, ಆಂತರಿಕ ಬಾಹ್ಯ ಸುರಕ್ಷತೆಗಾಗಿ ಉಪಯೋಗವಾಗಬೇಕು . ಅಂದರೆ law and order, internal external security, ease of doing business ಇದು ಕರವನ್ನು ತುಂಬುವ ವ್ಯಾಪಾರಿಗಳು ರಾಜನಿಂದ ನಿರೀಕ್ಷಿಸುವ ವ್ಯವಸ್ಥೆ .  ಹೀಗೆ ಯಾವ ಕಾರಣಕ್ಕಾಗಿ ಶುಲ್ಕವನ್ನು ತೆಗೆದುಕೊಳ್ಳಲಾಗುವುದೊ ; ಆ ಕಾರ್ಯವನ್ನು ಸಾಧಿಸದೇ ರಾಜ್ಯಭಾರಮಾಡುವುದು ಅತ್ಯಂತ ಪಾಪಕರವು . ರಾಜನಿಂದ ಸಿಗಬೇಕಾದ ರಕ್ಷಣೆಯ ಜವಾಬ್ದಾರಿಯನ್ನು ವ್ಯಾಪಾರಿಗಳು ಅನ್ಯರಿಂದ ಪಡೆಯುವಂತಾದರೆ , ಆಗ ಪ್ರಜೆಗಳು ಮಾಡುವ  ಪುಣ್ಯಕರ್ಮಗಳು ರಾಜನನ್ನು ನಾಶಮಾಡುತ್ತವೆ . ರಾಜನು ಪಡೆಯುವ ಆ ಶುಲ್ಕವು ರಾಜನನ್ನು ನರಕಕ್ಕೆ ಕೊಂಡೊಯ್ಯುತ್ತವೆ .

"ನಿರೂಪಿತಮಿದಂ ರಾಜ್ಞಃ ಪೂರ್ವೈಃ ರಕ್ಷಣವೇತನಂ | ಅರಕ್ಷಂಶ್ಚೋರತಃ ಚೋರಃ ತದ್ಧನಂ ನೃಪತೇರ್ಭವೇತ್ "| 

 ರಾಜನು ರಾಜ್ಯವನ್ನು ರಕ್ಷಣೆ ಮಾಡುವ ಕಾರ್ಯಕ್ಕಾಗಿ ವೇತನ ರೂಪದಲ್ಲಿ ಪ್ರಜೆಗಳು ಶುಲ್ಕವನ್ನು (tax) ಕೊಡುವರು . ಕರವು ರಾಜನಿಗೆ ಪ್ರಜೆಗಳು ರಾಜನಿಗೆ ಕೊಡುವ ವೇತನವೆಂದು ಪೂರ್ವಜರು ತಿರ್ಮಾನಿಸಿರುವರು . ಇದು ಗಮನಿಸಬೇಕಾದ ಅಂಶ . ರಾಜನು ಕರವನ್ನು ಅಧಿಕಾರದಿಂದ ಪಡೆಯುತ್ತಿಲ್ಲ, ಹೊರತಾಗಿ  ತಾನು ಮಾಡುವ ಕರ್ತವ್ಯದ ಪ್ರ್ತತಿಫಲವಾಗಿ ಪಡೆಯುತ್ತಿರುವನು . ಹಾಗಾಗಿ ಅವನಿಗೆ ಉತ್ತರದಾಯಿತ್ವವಿದೆ .  ಹಾಗಾಗಿ ತನ್ನ ಕೆಲಸವನ್ನು ಮಾಡದೆ ಕೇವಲ ಕರವನ್ನು ಸಂಗ್ರಹ ಮಾಡಿದರೆ ವೇತನವನ್ನು ಪಡೆದರೆ  ಅದು ಕಳ್ಳತನದ ಹಣವಾಗುವುದು . ರಾಜನು ಚೋರನಾಗುವನು . ಅಂತಹವನು ನಿಶ್ಚಯವಾಗಿ ನರಕವನ್ನು ಹೊಂದುವವನು . ಆದ್ದರಿಂದ ಈ ಗುಣಗಳನ್ನು ಹೊಂದಿರದ ನಾನು ಖಂಡಿತ ರಾಜನಾಗುವುದಿಲ್ಲ ಎಂದು ಮಂತ್ರಿಗಳ ಪ್ರಜೆಗಳ ಮನವಿಯನ್ನು ತಿರಸ್ಕರಿಸುತ್ತಾನೆ . ಹಾಗಾದರೆ ರಾಜ್ಯವನ್ನಾಳುವ ಸಮರ್ಥನಾರು ಎನ್ನುವ ಪ್ರಶ್ನೆಗೆ ಅವನು ಕೊಡುವ ಉತ್ತರ ತುಂಬಾ ಮಾರ್ಮಿಕವಾಗಿದೆ .

"ತಸ್ಮಾದ್ಯದಿ ತಪಸ್ತಪ್ತ್ವಾ ಪ್ರಾಪ್ತೋ ಯೋಗಿತ್ವಮೀಪ್ಸಿತಂ | ಭುವಃ ಪಾಲನಸಾಮರ್ಥ್ಯಯುಕ್ತ ಎಕೋ ಮಹೀಪತಿಃ ''|

 ಯಾವನು ತಪಸ್ಸನ್ನಾಚರಿಸಿ ಯೋಗಿತ್ವವನ್ನು  ಪಡೆಯುವವನೋ ಅಂತಹ ಭೂಮಿಯನ್ನು ರಕ್ಷಿಸುವ ಸಾಮರ್ಥ್ಯಯುಕ್ತನಾದ ಯೋಗಿಯೊಬ್ಬನೆ ರಾಜನಾಗಲು ಸಮರ್ಥ . ಇಲ್ಲಿ ಗಮನಿಸಿಬೇಕಾದ ಅಂಶವೆಂದರೆ ಇಂದಿಗೂ ಕೂಡ ಅಮೇರಿಕಾದ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯಲ್ಲಿ ಮಾನಸಿಕ ಧೃಢತೆ (mental stability), ಶಿಸ್ತು (discipline) , ನಡವಳಿಕೆ (Public conduct), ಬಗ್ಗೆ ಬಹಳ ಚರ್ಚೆಯಾಗುತ್ತದೆ . ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ರಾಷ್ಟ್ರದ ನಾಯಕತ್ವವನ್ನು ವಹಿಸಿಕೊಳ್ಳಲು ದೈಹಿಕ ಹಾಗೂ ಮಾನಸಿಕ ಅತ್ಯಂತ ಸಧೃಢತೆ ಮುಂತಾದ. ಈ ಎಲ್ಲಾ ಗುಣಗಳು ಅನಿವಾರ್ಯ. ಯೋಗಸಿದ್ಧಿಯು ಈ ಎಲ್ಲಾ ಗುಣಗಳನ್ನು ತಂದುಕೋಡುವುದಲ್ಲದೆ , ಅತ್ಯಂತ ಪ್ರಮುಖವಾದ ನೈತಿಕತೆ, ಧಾರ್ಮಿಕ ಪ್ರಜ್ಞೆ,  ಸಮಚಿತ್ತತ್ವ , ಸರ್ವಜನಾನುರಾಗ, ದಯೆ,  ಮುಂತಾದ ಈ ಕಾಲದಲ್ಲಿ ಮರೆತಿರುವ ಆದರೆ ಅತ್ಯಂತ ಅನಿವಾರ್ಯವಾದ ಗುಣಗಳನ್ನು ತಂದುಕೊಡುತ್ತದೆ .  ಕೇವಲ ಬಾಹ್ಯದ ಸಧೃಢತೆಯಿಂದ ನಾಯಕನು ಕೆಲಸಗಳನ್ನು ಸಕ್ಷಮವಾಗಿ ಮಾಡಬಲ್ಲನಾದರೂ , ಕೆಲಸಗಳಲ್ಲಿ  ಪ್ರಾಮಾಣಿಕತೆಯನ್ನು , ಪರಿಮಾಣಿಕಾರಿತ್ವವನ್ನು, ತರುವ ಗುಣ ಆಂತರಿಕ ಸಧೃಢತೆಯಿಂದಲೆ ಸಾಧ್ಯ . ಇದು ತಪಸ್ಸಿನಂದಲೆ ಸಾಧ್ಯ.  ಹಾಗಾಗಿ ಕಾರ್ಯವೀರ್ಯಾರ್ಜುನನು ಯೋಗಕ್ಕೆ ಮಹತ್ವವನ್ನು ಕೊಟ್ಟನು . 

ಇದನ್ನು ತಿಳಿದ ಮಂತ್ರಿಯೋಬ್ಬ ಕಾರ್ತವೀರ್ಯಾರ್ಜುನನಿಗೆ ಸಹ್ಯಾಚಲ ಪರ್ವತದಲ್ಲಿ ಆಶ್ರಮದಲ್ಲಿರುವ ಯೋಗವಿದ್ಯಾಪ್ರವರ್ತಕನಾದ ಪರಮಾತ್ಮನ ದತ್ತಾವತಾರದ ಬಗ್ಗೆ ತಿಳಿಸಿದ . ಹಾಗೂ ದತ್ತನಲ್ಲಿ ಶರಣು ಹೊಂದಿ ಯೋಗವಿದ್ಯೆಯನ್ನು ಸಂಪಾದಿಸಿಕೊಳ್ಳುವಂತೆ ಸೂಚಿಸಿದ .


 ಕಾರ್ತವೀರ್ಯಾರ್ಜುನನು ದತ್ತನ ಬಳಿ ಹೋಗಿ ಅನೇಕ ವಿಘ್ನಗಳನ್ನು ದಾಟಿ ಅವನ ಆಶೀರ್ವಾದವನ್ನು ಹಾಗೂ ಯೋಗವಿದ್ಯೆಯನ್ನು ಪಡೆದ . ಅದೇ ರೀತಿಯಾಗಿ ಆಡಳಿತಕ್ಕೆ ಅನುಕೂಲವಾಗುವ ಅನೇಕ ವರಗಳನ್ನು ಕೇಳಿದ . ಅವನು ಕೇಳುವ ವರಗಳ ಕುರಿತಾಗಿಯೆ ವಿಸ್ತಾರವಾದ ಪ್ರಭಂಧವನ್ನು ಬರೆಯಬಹುದು . 

  ಯದಿ ದೇವ ಪ್ರಸನ್ನಸ್ವಂ ತತ್ಪಯಚ್ಛರ್ಧಿಮುತ್ತಮಮ್ | ಯಥಾ ಪ್ರಜಾಂ ಪಾಲಯೇಯಂ ನ ಚಾಧರ್ಮಮವಾಪ್ನುಯಾಮ್ ||  

ಪರಾನುಸ್ಮರಣಂ ಜ್ಞಾನಮಪ್ರತಿದ್ವಂಧ್ವತಾಂ ರಣೇ | ಸಹಸ್ರಮಾಪ್ತುಮಿಚ್ಛಾಮಿ ಬಾಹೂನಾಂ ಲಘುತಾಗುಣಮ್ ||

ಅಸಜ್ಜಾ ಗತಯಃ ಸನ್ತು ಶೈಲಾಕಾಶಾಮ್ಬುಭೂಮಿಷು | ಪಾತಾಲೇಷು ಚ ಸರ್ವೇಷು ವಧಶ್ಚಾಪ್ಯಧಿಕಾನ್ನರಾತ್

ತಥಾಮಾರ್ಗಪ್ರವೃತ್ತಸ್ಯ ಸನ್ತು ಸನ್ಮಾರ್ಗದೇಶಿಕಾಃ | ಸನ್ತು ಮೇಃತಿಥಯಃ ಶ್ಲಾಘ್ಯಾ ವಿತ್ತಂ ವಾನ್ಯತಥಾಕ್ಷಯಮ್ |

ಅನಷ್ಟದ್ರವ್ಯತಾ ರಾಷ್ಟ್ರೇ ಮಮಾನುಸ್ಮರಣೇನ ಚ | ತ್ವಯಿ ಭಕ್ತಿಶ್ಚ ದೇವಾಸ್ತು ನಿತ್ಯಮವ್ಯಭಿಚಾರಿಣಿ |

 ಸಮೃದ್ಧಿಯಿಂದ ರಾಜ್ಯವನ್ನು ಪರಿಪಾಲಿಸುವಂತವಹ, ಅಧರ್ಮದಲ್ಲಿ ಭಾಗಿಯಾಗದಂತಹ ಸಮೄದ್ಧಿಯನ್ನು ಕರುಣಿಸು . ಪರನಾದ ಪರಮಾತ್ಮನ ಅನುಸಂಧಾನ ಎಂದೂ ತಪ್ಪದಂತಹ  ಜ್ಞಾನವನ್ನು ಕೊಡು . ಸಂಗ್ರಾಮದಲ್ಲಿ ಎದುರಾಳಿಯಿಲ್ಲದಿರುವಂತೆ ಮಾಡುವ ಶಕ್ತಿಯನ್ನು ಕೊಡು .ಸಹಸ್ರ ಬಾಹುಗಳನ್ನು ಕರುಣಿಸು . ನನಗಿಂತಲೂ ಮಹಾತ್ಮನಾದ ವ್ಯಕ್ತಿಯಿಂದ ನನಗೆ ವಧವು ಸಂಭವಿಸಲಿ. ನಾನು ಅಮಾರ್ಗದಲ್ಲಿ ಪ್ರವರ್ತಿಸಿದರೆ ಅದನ್ನು ತಿದ್ದುವ ಮಾರ್ಗದರ್ಶಕರು ದೊರಕಲಿ. ರಾಷ್ಟ್ರ್ರದಲ್ಲಿ ನನ್ನನು ಸ್ಮರಿಸುವುದರಿಂದ ಕಳೆದ ಸಂಪತ್ತೆಲ್ಲಾ ದೊರಕಲಿ .ಇದೆ ಮುಂತಾದ ಅತ್ಯತ್ತಮ ಆಡಳಿತಕ್ಕೆ ಬೇಕಾಗುವ ವರಗಳನ್ನು ಕೇಳಿದನೆ , ತನ್ನ ಉತ್ಕರ್ಷಕ್ಕಾಗಿ ಯಾವುದೆ ವರಗಳನ್ನು ಕೇಳಲಿಲ್ಲ. 

 ಇದು ನಮ್ಮ ಪ್ರಾಚೀನರ ರಾಜಕೀಯ ವಿಜ್ಞಾನ (political science) . ಇಂದು ಪಠ್ಯ ಪುಸ್ತಕ ತೆರೆದರೆ ರಾಜಕೀಯ ವಿಜ್ಞಾನದಲ್ಲಿ ಕೇವಲ ಪಾಶ್ಚಾತ್ಯರ ಚಿಂತನೆಗಳು , ವಾಕ್ಯಗಳೆ ರಾರಾಜಿಸುತ್ತವೆ. ಹೆಚ್ಚೆಂದರೆ ಕೌಟಿಲ್ಯನ ಅರ್ಥಶಾಸ್ತ್ರದ ಉಲ್ಲೇಖ ಕೆಲವು ಕಡೆ ದೊರೆಯುತ್ತವೆ . ಆದರೆ ನಮ್ಮ ಪುರಾಣ ಹಾಗೂ ಧರ್ಮಶಾಸ್ತ್ರ ಸಾಹಿತ್ಯದಲ್ಲಿ ಅಪಾರವಾದ ಜ್ಞಾನ ಭಂಡಾರವಿದೆ ಅದನ್ನು ಈಗೀನ ಸಂದರ್ಭಕ್ಕೆ, ಭಾಷೆಗೆ , ಶೈಲಿಗೆ ಅನುಗುಣವಾಗಿ ನಿರೂಪಿಸುವ ಅನಿವಾರ್ಯತೆಯಿದೆ . ಅದಕ್ಕಾಗಿ ಸಂಸ್ಕೃತಜ್ಞರು ನ್ಯಾಯ- ವ್ಯಾಕರಣಾದಿ ಶಾಸ್ತ್ರಗಳಲ್ಲ್ದೆ , ಆಧುನಿಕ Environmental science, political science, social science , Ethics , jurisprudence , moral science ಮುಂತಾದ  ಆಧುನಿಕ ಶಾಖೆಗಳನ್ನು ಪೂರ್ವಪಕ್ಷಗಳ ರೀತಿಯಲ್ಲಿ ಅಭ್ಯಸಿಸಿಭೆಕಾಗಿದೆ . ತದನಂತರ ಈ ವಿಷಯದಲ್ಲಿ ಭಾರತೀಯ ದೃಷ್ಟಿಕೋನವನ್ನು ಜಗತ್ತಿನ ಮುಂದಿಡಬೇಕಾಗಿದೆ .  

 ಡಾ.ಶ್ರೀನಿಧಿ ಪ್ಯಾಟಿ

ಪೂರ್ಣಪ್ರಜ್ಞ ಸಂಶೋಧನ ಮಂದಿರ.ಬೆಂಗಳೂರು.

Comments

Popular posts from this blog

Śrī Madhvācārya and the Doctrine of Bhakti

The Saint of the Century - Glimpses of Sri Vishweshatirtha's Unparalleled Life

Sri Vyasaraja: A Historical Reappraisal – Dispelling Myths and Misconceptions