ಇಂಡೋಲೊಜಿ ವಿಮರ್ಶೆ 4 – ಬ್ರಿಟಿಷರ ಆಗಮನ




ಕಳೆದ ಸಂಚಿಕೆಯಲ್ಲಿ ಬ್ರಿಟಿಷರ ಆಗಮನದವರೆಗೂ ನಡೆದ ಇಂಡೋಲೊಜಿಯ ಅಧ್ಯಯನ ಪ್ರಕಾರವನ್ನು ತಿಳಿದಿದ್ದೆವು. ಈ ಸಂಚಿಕೆಯಲ್ಲಿ ಬ್ರಿಟಿಷರ ಆಗಮನದ ನಂತರ ಪ್ರಾರಂಭವಾದ ವ್ಯವಸ್ಥಿತವಾದ ಇಂಡೋಲೊಜಿಯ ಅಧ್ಯಯನ ಪ್ರಕಾರವನ್ನು ತಿಳಿಯೋಣ.

ವ್ಯಾಪಾರವನ್ನು ಮಾಡಲು ಯುರೋಪಿನಿಂದ ಭಾರತಕ್ಕೆ ಆಗಮಿಸಿದ ವಸಾಹತುಶಾಹಿಗಳಲ್ಲಿ ಪೋರ್ಚುಗೀಸರು ಮತ್ತು ಡಚ್ಚರು ಮೊದಲಿಗರು. ಆಮೇಲೆ ಫ್ರೆಂಚರು ಮತ್ತು ಬ್ರಿಟೀಷರು ಆಗಮಿಸಿದರು. ಇವರೆಲ್ಲರೂ ಭಾರತೀಯ ಬಂದರುಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಪೈಪೋಟಿಗೆ ಇಳಿದರು.  ತಮ್ಮ ದೇಶಗಳ ಸರ್ಕಾರದ ನೆರವಿನಿಂದ ಹಾಗೂ ಸ್ಥಳೀಯ ರಾಜರ ಜೋತೆಗೆ ಮಾಡಿಕೊಂಡ ಒಪ್ಪಂದಗಳಿಂದ ಮತ್ತು ಅಧುನಿಕ ಸೈನ್ಯದ ನೆರವಿನಿಂದ ಮೊಘಲರಿಗಿಂತ ಬಹಳ ಪ್ರಬಲರಾದರು. 1757 ರಲ್ಲಿ ನಡೆದ ನಿರ್ಣಾಯಕ ಪ್ಲಾಸಿ ಕದನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತೀಯ ಸೈನ್ಯವನ್ನು ಸೋಲಿಸಿ ಸಂಪೂರ್ಣ ಪ್ರಭುತ್ವವನ್ನು ಸಾಧಿಸಿತು. ನಂತರ ಕೆಲವೇ ವರ್ಷಗಳಲ್ಲಿ ಸ್ಥಳೀಯ ರಾಜ್ಯಗಳ ಮೇಲೆ ಅನೇಕ ರೀತಿಯಾದ ಕುಟಿಲ ಒಪ್ಪಂದಗಳನ್ನು ಹಾಗೂ ನಿಯಮಗಳನ್ನು ಹೇರಿ ಸಂಪೂರ್ಣ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬ್ರಿಟಿಷ್ ಸರ್ಕಾರದ ಅಧೀನದಲ್ಲಿರುವ ಪ್ರೈವೇಟ್ ಕಂಪನಿಯಾಗಿದ್ದು, ಅದು ಕೇವಲ ಭಾರತದಲ್ಲಿ ವ್ಯಾಪಾರವನ್ನು ಮಾಡಿ ಹೆಚ್ಚಿನ ಲಾಭ ಗಳಿಸಿ ಹಣವನ್ನು ಸಂಪಾದಿಸುವಲ್ಲಿ ಮಾತ್ರ ಆಸಕ್ತಿಯನ್ನು ಹೊಂದಿತ್ತು. ಪ್ರಾರಂಭದಲ್ಲಿ ಬ್ರಿಟಿಷ್ ಸರ್ಕಾರವು ಕೂಡ ಕ್ರಿಶ್ಚಿಯಾನಿಟಿಯನ್ನು ಭಾರತೀಯರ ಮೇಲೆ ಹೇರದೆ, ಧಾರ್ಮಿಕ ಬದಲಾವಣೆಗಳನ್ನು ತರುವ ವಿಷಯದಲ್ಲಿ ಬಹಳ ಎಚ್ಚರಿಕೆಯ ನಡೆಯನ್ನು ಅನುಸರಿಸಿತು. ಈ ನಡೆ ಪ್ರಾಯೋಗಿಕವಾಗಿತ್ತು. ಭಾರತದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಮಧ್ಯ ಪ್ರವೇಶಿಸಿದಾಗಲೆಲ್ಲಾ ದೊಡ್ಡ ಕ್ರಾಂತಿಯಾಗಿ ಪ್ರತಿಭಟನೆ ಹಾಗೂ ಯುದ್ಧಗಳಾಗಿದ್ದನ್ನು ಸರ್ಕಾರ ಹಾಗೂ ಕಂಪನಿಯು ಗಮನಿಸಿತ್ತು. ಆ ಕಾಲದ ಚಹಾ ವ್ಯಾಪಾರಿ ಟ್ವೈನಿಂಗ್ (Mr.Twinning) ತನ್ನ ಅಭಿಪ್ರಾಯವನ್ನು ಹೀಗೆ ದಾಖಲಿಸಿದ್ದಾನೆ -

"As long as we continue to govern India in the mild, tolerant spirit of Christianity, we may govern it with ease; but if ever the fatal day should arrive, when religious innovation shall set her foot in that country, indignation will spread from one end of the Hindustan to the other, and the arms of fifty millions of people will drive us from that portion of the globe, with as much ease as the sand of the desert is scattered by the wind."

(ಎಲ್ಲಿಯವರೆಗೆ ನಾವು ಕ್ರಿಶ್ಚಿಯಾನಿಟಿಯ ಮೃದು ಹಾಗೂ ಸಹನಶೀಲತೆಯ ದೃಷ್ಟಿಕೋನದಿಂದ ಭಾರತವನ್ನು ಆಳುತ್ತೇವೆ, ಅಲ್ಲಿಯವರೆಗೆ ಯಾವುದೇ ತೊಂದರೆಗಳನ್ನು ಅನುಭವಿಸುವುದಿಲ್ಲ. ಆದರೆ ಒಮ್ಮೆ ಧಾರ್ಮಿಕ ಬದಲಾವಣೆಗೆ ನಾವು ಪ್ರಯತ್ನ ಮಾಡಿದರೆ, ಭಾರತದ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ಆಕ್ರೋಶ ಭುಗಿಲೆದ್ದು ಮರಳುಗಾಡಿನಲ್ಲಿ ಬಿರುಗಾಳಿಯು ಮರಳನ್ನು ಚೆಲ್ಲಿಸುವಂತೆ ಐದು ಕೋಟಿ ಜನರು ನಮ್ಮನ್ನು ಸುಲಭವಾಗಿ ಈ ದೇಶದಿಂದ ಹೊಡೆದೋಡಿಸುತ್ತಾರೆ).

ಆರ್.ಸಿ. ಮಜುಂದಾರ್ ತಮ್ಮ British Paramountcy and Indian Renaissance, Part 2 (1818-1905) ಗ್ರಂಥದಲ್ಲಿ, ಭಾರತದಲ್ಲಿ ಬಹಳ ಕಾಲ ವಾಸವಿದ್ದ ಮೊಂಟ್ಗೊಮೇರಿ (Col. Montgomery) ಎಂಬುವವರ ಅಭಿಪ್ರಾಯವನ್ನು ಹೀಗೆ ದಾಖಲಿಸಿದ್ದಾರೆ –

 "Christianity had nothing to teach Hinduism, and no missionary ever made a really good Christian convert in India."

"He was more anxious to save the 30,000 of his country-men in India than to save the souls of all the Hindus by making them Christians at so dreadful a price."

( ಕ್ರಿಶ್ಚಿಯಿನಿಟಿಯು ಹಿಂದೂಯಿಸಂಗೆ ತಿಳಿಸಿಕೊಡಬೇಕಾದ ಯಾವ ಅಂಶಗಳನ್ನು ಹೊಂದಿಲ್ಲ. ಭಾರತದ ಮಿಷನರಿಗಳು ಮತಾಂತರದಿಂದ ಉತ್ತಮವಾದ ವ್ಯಕ್ತಿಗಳನ್ನು ನಿರ್ಮಿಸಲಿಲ್ಲ. ಚಹಾ ವ್ಯಾಪಾರಿಯಂತೆ ಇವನೂ ಕೂಡ ಭಾರತೀಯರನ್ನು ಮತಾಂತರಿಸಿ ಅವರನ್ನು ಉದ್ಧರಿಸುವ ಬದಲು ತನ್ನ ದೇಶದ ಮೂವತ್ತು ಸಾವಿರ ಜನರ ಪ್ರಾಣಗಳನ್ನು ಕಾಪಾಡಲು ಆಸಕ್ತನಾಗಿದ್ದನು).

ಹೀಗೆ, ಲಾರ್ಡ್ ಕಾರ್ನ್ ವಾಲಿಸ್ (1786-1805) ನ ಅಧಿಕಾರದ ಅವಧಿಯಲ್ಲಿ ಭಾರತದ ಧಾರ್ಮಿಕ ಆಚರಣೆಗಳ ಕುರಿತಾಗಿ ಉದಾರ ಮನೋಭಾವದ ದೃಷ್ಟಿಕೋನವನ್ನು ಗಮನಿಸಬಹುದು. 1793 ರಲ್ಲಿ ಗವರ್ನರ್ ಇನ್ ಜನರಲ್ ಈ ರೀತಿಯಾಗಿ ಆದೇಶವನ್ನು ಹೊರಡಿಸುತ್ತಾರೆ -

 "Preserve the laws of the Shaster and the Koran, and to protect the natives of India in the free exercise of their religion."

(ಶಾಸ್ತ್ರಗಳ ಹಾಗೂ ಕುರ್ ಆನ್‌ನ ನಿಯಮಗಳನ್ನು ರಕ್ಷಿಸಬೇಕು ಹಾಗೂ ಧಾರ್ಮಿಕ ಆಚರಣೆಗಳಿಗಾಗಿ ಮುಕ್ತ ವಾತಾವರಣವನ್ನು ಕಲ್ಪಿಸಬೇಕು).

ಆದರೆ ಈ ಕಾನೂನಿನ ಅನ್ವಯಕ್ಕಿಂತ ಒಂದು ವರ್ಷ ಪೂರ್ವದಲ್ಲಿ ಚಾರ್ಲ್ಸ್ ಗ್ರಾಂಟ್ ತಾನು ಬರೆದ Observations on the State of Society among the Asiatic Subjects of Great Britain (1792) ಎಂಬ ಪುಸ್ತಕದಲ್ಲಿ ಹೀಗೆ ದಾಖಲಿಸುತ್ತಾನೆ -

 "The Company manifested a laudable zeal for extending, as far as its means went, the knowledge of the Gospel to the pagan tribes among whom its factories were placed."

ಚಾರ್ಲ್ಸ್ ಗ್ರಾಂಟ್, ಈಸ್ಟ್ ಇಂಡಿಯಾ ಕಂಪನಿಯ ಪ್ರಮುಖ ವ್ಯಕ್ತಿಯಾಗಿದ್ದು, ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಉದ್ಧಾರ ಕ್ರೈಸ್ತ ಧರ್ಮದ ಮೂಲಕವೇ ಸಾಧಿಸಬೇಕೆಂದು ನಂಬಿ, ಮಿಷನರಿ ಚಟುವಟಿಕೆಗಳ ಮೂಲಕ ಭಾರತದಲ್ಲಿ ಕ್ರೈಸ್ತೀಕರಣವನ್ನು ಪ್ರೋತ್ಸಾಹಿಸಿದನು. ಇದು ಆ ಕಾಲದ ಎವೆಂಜೆಲಿಕಲ್ ಕ್ರಿಶ್ಚಿಯನ್ನರ ಕಂಪನಿ ಹಾಗೂ ಸರ್ಕಾರದ ಮೇಲಿನ ಒತ್ತಾಯವನ್ನು, ಬ್ರಿಟಿಷರ ಆಡಳಿತದ ಅಡಿಯಲ್ಲಿ ಕ್ರೈಸ್ತ ಧರ್ಮವನ್ನು ಭಾರತದಲ್ಲಿ ಹರಡುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.

ಇದೆಲ್ಲದರ ಫಲವಾಗಿ 1808ರಲ್ಲಿ ಕ್ರಿಶ್ಚಿಯನ್ ಮಿಷನರಿ ಶಾಲೆಗಳ ಪ್ರಾರಂಭವಾಯಿತು. ಬೈಬಲ್‍ನ ಭಾರತೀಯ ಭಾಷೆಗಳ ಅನುವಾದ ಕಾರ್ಯವೂ ಭಾರತದ ಬ್ರಿಟಿಷ ಸರ್ಕಾರದ ಸಹಾಯದಿಂದ ಪ್ರಾರಂಭವಾಯಿತು. ಅನುವಾದ ಮುಂತಾದ ಕಾರ್ಯಗಳನ್ನು ಹೊರತುಪಡಿಸಿ, ಬ್ರಿಟಿಷರಿಗೆ ವೈದಿಕ – ಅವೈದಿಕ ಭಾರತೀಯ ಸಾಹಿತ್ಯದಲ್ಲಿ ಯಾವುದೆ ಆಸಕ್ತಿ ಇರಲಿಲ್ಲ. ಇದು ಅವರ ಆಡಳಿತ ವರ್ಗದಲ್ಲಿದ್ದ ಮಾನಸಿಕತೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಆಡಳಿತ ಸಮಗ್ರಕಾಲದಲ್ಲಿ ಭಾರತದಲ್ಲಿದ್ದ ಬ್ರಿಟಿಷರ ಉನ್ನತ ಅಧಿಕಾರಿಗಳಿಂದ ಹಿಡಿದು ಸಣ್ಣ ಪುಟ್ಟ ಅಧಿಕಾರಿಗಳವರೆಗೆ ಸ್ವಶ್ರೇಷ್ಠತ್ವ ವ್ಯಸನವನ್ನು ಹೊಂದಿದ್ದರು. ಅವರ ಮನಸ್ಥಿತಿಯನ್ನು ಒಂದು ವಾಕ್ಯದಲ್ಲಿ ಹೀಗೆ ಸಂಗ್ರಹಿಸಬಹುದು – "India was a profitable nuisance."

ಇನ್ನು ಇಂಗ್ಲೆಂಡ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳು ಭಾರತವನ್ನು ಹೇಗೆ ನಿಭಾಯಿಸಬೇಕೆಂಬ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದವು. ಅವುಗಳನ್ನು ಮೂರು ವಿಭಾಗಗಳಲ್ಲಿ ಸಂಗ್ರಹಿಸಬಹುದು – ಕನ್ಸರ್ವೇಟಿವ್ ಪಕ್ಷದವರು ಭಾರತದ ಸಂಸ್ಕೃತಿಯನ್ನು ಬುಡಮೇಲು ಮಾಡುವುದು ಕಷ್ಟಸಾಧ್ಯವೆಂದು ತಿಳಿದಿದ್ದರು, ಆದರೂ ಭಾರತೀಯ ಜೀವನ ಶೈಲಿಯನ್ನು ಮೇಲ್ದರ್ಜೆಗೆ ತೆಗೆದುಕೊಂಡು ಹೋಗುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಆದರೆ ಅದರ ಅಳವಡಿಕೆಯಲ್ಲಿ ಎದುರಾಗಬಹುದಾದ ಪ್ರತಿಭಟನೆಗಳ ಬಗ್ಗೆ ಎಚ್ಚರಿಕೆಯ ನಡೆ ಅನುಸರಿಸಿದರು. ಲಿಬರಲ್ ಪಕ್ಷದವರೂ ಕೂಡ ಹಂತ ಹಂತವಾಗಿ ಪಾಶ್ಚಾತ್ಯ ಜೀವನ ಶೈಲಿಯನ್ನು ಮತ್ತು ಸಂಸ್ಕೃತಿಯನ್ನು ಭಾರತದಲ್ಲಿ ಅಳವಡಿಸಬೇಕೆಂದು ನಂಬಿದರು. ಇನ್ನೂ ರ್ಯಾಷನಲಿಸ್ಟ್ ಗಳು ತರ್ಕಾಧಾರಿತ ಚಿಂತನೆಯೇ ಅಜ್ಞಾನ ನಿವಾರಣೆಯ ಮೂಲ ಸಾಧನವಾದ್ದರಿಂದ, ತರ್ಕಾಧಾರಿತ ಚಿಂತನೆಯು ಪ್ರಬಲವಾದ ನಾವು ಪೂರ್ವೀಯ ದೇಶಗಳಲ್ಲಿ ಈ ಚಿಂತನಾ ಪದ್ಧತಿಯನ್ನು ಪ್ರಸಾರ ಮಾಡಬೇಕೆಂದು ಪ್ರತಿಪಾದಿಸಿದರು.

ಒಟ್ಟಾರೆ, 18ನೇ ಶತಮಾನದ ಬ್ರಿಟಿಷ್ ಜನರಿಗೆ ಧರ್ಮ ಎಂದರೆ ಕ್ರಿಶ್ಚಿಯನಿಟಿ ಅಷ್ಟೇ. ಭಾರತೀಯರ ಮೇಲಿನ ಯುರೋಪಿನವರ ದೃಷ್ಟಿಕೋನವು ತಾವೇ ಶ್ರೇಷ್ಠರು ಎಂಬ ಭಾವನೆಯಿಂದ ಪ್ರೇರಿತವಾಗಿತ್ತು. ಇದು ಆ ಕಾಲದ ಪ್ರತಿ ಬ್ರಿಟಿಷ್ ಜನರಲ್ಲೂ ಇತ್ತು. 1810ರಲ್ಲಿ ಭಾರತಕ್ಕೆ ಆಗಮಿಸಿದ ಗವರ್ನರ್ ಜನರಲ್ ಹಾಸ್ಟಿಂಗ್ಸ್ ಬರೆದಿದ್ದಾನೆ:

 "The Hindoo appears a being merely limited to mere animal functions, and even in them indifferent...with no higher intellect than a dog..."

(ಹಿಂದೂ ಕೇವಲ ಪ್ರಾಣಿಯ ರೀತಿಯ ಕೆಲಸಗಳಷ್ಟೇ ಮಾಡುವವನಂತೆ ಕಾಣುತ್ತಾನೆ, ಹಾಗೂ ಅವುಗಳಲ್ಲೂ ಅತೀ ಅಸಡ್ಡೆಯನ್ನು ತೋರಿಸುತ್ತಾನೆ. ಅವರ ವೈಚಾರಿಕತೆ ನಾಯಿಗಿಂತ ಮೇಲೆ ಇಲ್ಲ.)

ಹೀಗಿದ್ದಾಗ, ಬ್ರಿಟಿಷರು ಯಾಕಾಗಿ ಭಾರತೀಯ ಗ್ರಂಥಗಳನ್ನು ಅಭ್ಯಾಸ ಮಾಡಿದರು? ಕಂಪನಿ ಹಾಗೂ ಬ್ರಿಟಿಷ್ ಸರ್ಕಾರದ ಬೆಂಬಲವಿಲ್ಲದಿದ್ದರೆ ಕ್ರಿಶ್ಚಿಯನ್ ಮಿಷನರಿಗಳು ಹೇಗೆ ಭಾರತದಲ್ಲಿ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದರು? ಈ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಇವುಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರವನ್ನು ಕಂಡುಕೊಳ್ಳೋಣ.

Dr.Shrinidhi Pyati

Comments

Popular posts from this blog

Śrī Madhvācārya and the Doctrine of Bhakti

The Saint of the Century - Glimpses of Sri Vishweshatirtha's Unparalleled Life

Sri Vyasaraja: A Historical Reappraisal – Dispelling Myths and Misconceptions