ಧಾರ್ಮಿಕಪ್ರಪಂಚದ "ಆಧುನಿಕ ವಿಜ್ಞಾನ"ವಾದಿಗಳು

               


              ಹೌದು ಇಂದು ಧಾರ್ಮಿಕ ಪ್ರಪಂಚದಲ್ಲಿ ಆಧುನಿಕ ವಿಜ್ಞಾನವಾದಿಗಳ ಸಂಖ್ಯೆ ಜಾಸ್ತಿಯಾಗಿದೆ . ಸನಾತನದ ಧರ್ಮದ ಪ್ರತಿಯೊಂದು ಆಚರಣೆಗಳಿಗೆ ಹಾಗು ಸಿದ್ಧಾಂತಗಳಿಗೆ ಆಧುನಿಕ ವಿಜ್ಞಾನದ ಸಮ್ಮತಿಯ ಮುದ್ರೆಯನ್ನು ಒದಗಿಸಲು ಪ್ರಯತ್ನಿಸುವವರ ಮತ್ತು ಅದನ್ನು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ.  ಇದರ ಪರಿಣಾಮವಾಗಿ  ದೀಪಾವಳಿಯಲ್ಲಿ ಹಚ್ಚುವ ದೀಪದಿಂದ ಪ್ರಾರಂಭಿಸಿ ಸಂಕ್ರಾಂತಿಯಲ್ಲಿ ತಿನ್ನುವ ಎಳ್ಳು ಬೆಲ್ಲದವರೆಗಿನ ಎಲ್ಲಾ ಸಂಪ್ರದಾಯಗಳಿಗೂ "ವೈಜ್ಞಾನಿಕ" ಸ್ಪರ್ಶವನ್ನು ನೀಡಲು ಅನೇಕರು ಪ್ರಯತ್ನಿಸುತ್ತಾರೆ . ಈ ಪ್ರಯತ್ನದಲ್ಲಿ ವಿಜ್ಞಾನದ ಹೆಸರಿನಲ್ಲಿ ಅನೇಕ ಬಾಲಿಶ ಕಾರಣಗಳನ್ನು ನೀಡುತ್ತಾ , ವಿಜ್ಞಾನಕ್ಕೂ ನ್ಯಾಯ ಒದಗಿಸದೆ ,ಶಾಸ್ತ್ರ ಸಂಪ್ರದಾಯಗಳಿಗೂ ಅನ್ಯಾಯ ಮಾಡುತ್ತಾ ಅಪಹಾಸ್ಯಗೀಡಾಗುತ್ತಿದ್ದಾರೆ . ಈ ಮನಸ್ಥಿತಿಗೆ ಕಾರಣವನ್ನು ಯೋಚಿಸಬೇಕು . ೧೮ನೆಯ ಶತಮಾನದ ನಂತರ ಆಧುನಿಕ ವಿಜ್ಞಾನ ಕಂಡ ಬೆಳವಣಿಗೆ ಊಹೆಗೆ ನಿಲುಕದ್ದು . ವಿಜ್ಞಾನಿಗಳು ನಿಸರ್ಗದ ಅನೇಕ ಗುಟ್ಟುಗಳನ್ನು ಅರ್ಥಮಾಡಿಕೊಳ್ಳುತ್ತಾ ಅನೇಕ ಸಿದ್ಧಾಂತಗಳನ್ನು ಮಂಡಿಸಿದರು . ಅವುಗಳನ್ನು ಪ್ರಯೋಗಕ್ಕೊಳಪಡಿಸಿ ಖಚಿತಪಡಿಸಿಕೊಂಡರು . ಇಂತಹ ಸಿದ್ಧಾಂತಗಳನ್ನು ಬಳಸಿಕೊಂಡು ತಂತ್ರಜ್ಞಾನವು ಅಗಾಧವಾಗಿ ಬೆಳೆಯಿತು . ಐವತ್ತು ವರ್ಷಗಳ ಹಿಂದೆಯೆ ಚಂದ್ರನನ್ನು ತಲುಪಿದ್ದೂ ಆಯಿತು . ಇಂದು ನಾವು ಜಗತ್ತಿನ ಯಾವ ಮೂಲೆಯಲ್ಲಿ ಕುಳಿತುಕೊಂಡರು ಜಗತ್ತಿನ ಇನ್ನೊಂದು ಮೂಲೆಯಲ್ಲಿರುವ ವ್ಯಕ್ತಿಯನ್ನು ಯಾವುದೆ ಪ್ರಯಾಸವಿಲ್ಲದೆ ಸಂಪರ್ಕಿಸಬಹುದು . ತಂತ್ರಜ್ಞಾನವು ನಮ್ಮ ಜೀವನವನ್ನು ಬಹಳ ಸುಲಭವಗಿಸಿರುವುದನ್ನು ಯಾರೂ ಅಲ್ಲಗೆಳೆಯುವುದಿಲ್ಲ. ಈ ತಂತ್ರಜ್ಞಾನದ ಅಡಿಪಾಯ ವಿಜ್ಞಾನದ ಸಿದ್ದಾಂತಗಳು . ಹಾಗಾಗಿ ವಿಜ್ಞಾನವು ಶ್ರೇಷ್ಠವೆಂಬ ಭಾವನೆ ಎಲ್ಲರ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಅದೇ ಕಾರಣದಿಂದ ಯುವಪೀಳಿಗೆಯಲ್ಲಿ ನಮ್ಮ ಆಚರಣೆಗಳ ವಿಷಯದಲ್ಲಿ ಗೊಂದಲ ಮೂಡಲು ಪ್ರಾರಂಭವಾಯಿತು , ಅದರ ಪರಿಣಾಮವಾಗಿ ಅನೇಕರು ಪ್ರಶ್ನಿಸಲು ಪ್ರಾರಂಭಿಸಿದರು . ಆದರೆ ಉತ್ತರ ಕೊಡಬೆಕಾದವರು  ಕೆಲವೊಮ್ಮೆ ನಿರುತ್ತರರಾದರೆ ,ಕೆಲವೊಬ್ಬರು ಯಾರೋ ಹೇಳಿದ ವೈಜ್ಞಾನಿಕ ಕಾರಣಗಳನ್ನು ತಿಳಿಸಿ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು . ಉದಾಹರಣೆಗೆ ಉಪನಿತನಾದ ವಟುವು ಶೌಚಕ್ಕೆ ಹೋಗುವಾಗ ಯಜ್ಞೋಪವೀತವನ್ನು ಕಿವಿಗೆ ಯಾಕೆ ಸುತ್ತಿಕೊಳ್ಳಬೇಕು ಎಂದು ಪ್ರಶ್ನಿಸಿದರೆ ,ಜನಿವಾರವನ್ನು ಕಿವಿಗೆ ಸುತ್ತಿಕೊಳ್ಳುವುದರಿಂದ  ಶೌಚವು ಬಹಳ ಸಲಿಸಾಗಿ ಆಗುತ್ತದೆ ಎಂದು ವಿಜ್ಞಾನವೇ ನಿರೂಪಿಸಿದೆ ಎಂಬ ಉತ್ತರವನ್ನು ಅನೇಕರು ಕೊಟ್ಟಿರುತ್ತಾರೆ . ಇದು ತಾತ್ಕಾಲಿಕವಾಗಿ ಹುಡುಗನ ಜಿಜ್ಞಾಸೆಯನ್ನು ಶಮನಗೊಳಿಸಿದರೂ, ನಂತರ ಯೋಚನೆ ಮಾಡಿದಾಗ , ಈ ರೀತಿಯಾದ ಪ್ರಯೋಜನವಿದ್ದರೆ ಮಹಿಳೆಯರಿಗೆ ಯಾಕೆ ಈ ವ್ಯವಸ್ಥೆಯಿಲ್ಲ ಎನ್ನುವ ಸಂದೇಹವೋ ಅಥವಾ ಈ ರೀತಿಯಾದ ವ್ಯವಸ್ಥೆಯಿಲ್ಲದಿದ್ದರೂ ಜಗತ್ತಿನ ಅನೇಕ ಜನರು ದೈನಂದಿನ ಚಟುವಟಿಕೆಯನ್ನು ಆರಾಮವಾಗಿ ನಿರ್ವಹಿಸುತ್ತಿರುವುದರಿಂದ ಈ ನಿಯಮ ನಮಗೇ ಎಕೆ ಎಂಬ ಸಂದೇಹ ಬರುವುದು ಸಹಜ . ಇದರಿಂದ ಆ ಅನುಷ್ಠಾನದಲ್ಲಿ ಅವನಿಗೆ ಅನಾದರ ಹುಟ್ಟಿ , ಅದರ ಆಚರಣೆಯನ್ನು ಬಿಡುತ್ತಾನೆ . ಈ ವರ್ಗಕ್ಕೆ ಸೇರಿದವರೇ ಮಾವಿನ ತೋರಣ ಕಟ್ಟುವುದರಿಂದ , ಮಹಿಳೆಯರು ಕುಂಕುಮ ಹಚ್ಚಿಕೊಳ್ಳುವುದರಿಂದ, ಬಳೆ ಹಾಕಿಕೋಳ್ಳುವುದರಿಂದ Negetive energy ದೂರವಾಗುತ್ತದೆಂದು ಹೇಳುವುದಲ್ಲದೆ , ಅದನ್ನು ಬರೆದು ಹಂಚಿಕೊಂಡು ಬೇರೆಯವರಲ್ಲೂ "ಎನೋ ವಿಜ್ಞಾನವಿದೆಯೆಂಬ" ಭ್ರಾಂತಿಯನ್ನು ಬಿತ್ತುವುದನ್ನು ನೋಡುತ್ತಿರುತ್ತತೇವೆ.
         ಇನ್ನೂ ಕೆಲವು ವರ್ಗದವರು ಆಧುನಿಕವಿಜ್ಞಾನವು ಎನೇ ಹೊಸ ಆವಿಷ್ಕಾರ  ಮಾಡಿದರೂ ಅಥವಾ ಸಿದ್ಧಾಂತವನ್ನು ಮಂಡಿಸಿದರೂ ಪೂರ್ವಾಪರವನ್ನು ಯೋಚಿಸದೆ  ಅದೆಲ್ಲವೂ ನಮ್ಮ ಪೂರ್ವಜರಿಗೆ ಮೊದಲೇ ಗೊತ್ತಿತ್ತು ಎಂದೋ, ಈ ಸಿದ್ಧಾಂತವು ಮೊದಲೆ ನಮ್ಮಲ್ಲಿತ್ತು ಎಂದೋ ವಾದ  ಮಾಡುತ್ತಿರುತ್ತಾರೆ.  ಉದಾಹರಣೆಗೆ ಡಾರ್ವಿನ್ನಿನ ವಿಕಾಸವಾದದ ಸಿದ್ಧಾಂತವನ್ನು ತೆಗೆದುಕೊಳ್ಳೋಣ , ಅನೇಕರು  ದಶಾವತಾರಕ್ಕೂ ಈ ಸಿದ್ದಾಂತಕ್ಕೂ ಹೋಲಿಕೆ ಮಾಡುವುದನ್ನು ಕೇಳುತ್ತೇವೆ. ಮೊದಲು ಜಲಚರ ಪ್ರಾಣಿಗಳು , ನಂತರ ಉಭಯಚರ ಪ್ರಾಣಿಗಳು, ನಂತರ ಕೇವಲ ಭೂಚರ ಪ್ರಾಣಿಗಳು  , ನಂತರ ಪರಿಪೂರ್ಣ ಮಾನವನ ಪೂರ್ವಸ್ಥಿತಿ , ನಂತರ ಪರಿಪೂರ್ಣ ಮಾನವನ ಅಸ್ತಿತ್ವ ಎನ್ನುವ ವಿಕಾಸ ಕ್ರಮವನ್ನು ದಶಾವತಾರವು ತಿಳಿಸುತ್ತದೆ ಎಂದು ಡಾರ್ವಿನ್ನಿನ ವಿಕಾಸವಾದಕ್ಕೂ ದಶಾವತಾರಕ್ಕೂ ಸಾಮ್ಯತೆಯನ್ನು ತೋರಿಸುತ್ತಾರೆ .  ಆದರೆ ಮತ್ಸ್ಯಾವತಾರವಾದಾಗಲೆ ಪರಿಪೂರ್ಣ ಮಾನವ ಸತ್ಯವೃತ ರಾಜನಿದ್ದನು ಎನ್ನುವುದನ್ನು ಪುರಾಣಗಳು ಉಲ್ಲೇಖಿಸುತ್ತವೆ . ಕೂರ್ಮಾವತವತಾರಕ್ಕಿಂತಲೂ ಮುಂಚೆಯೆ ಉಭಯಚರ ಪ್ರಾಣಿಯಾದ ವಾಸುಕಿಯನ್ನು ಪುರಾಣಗಳು ಉಲ್ಲೇಖಿಸುತ್ತವೆ . ಹೀಗೆ ಅತಾರ್ಕಿಕವಾದ ಇಂತಕ ಹೋಲಿಕೆಗಳು ವಿಜ್ಞಾನಕ್ಕೂ ಮತ್ತು ಪುರಾಣಗಳಿಗೂ ಮಾಡುವ ಅಪಚಾರವೇ ಹೊರತು ಮತ್ತೇನಲ್ಲ. ಇನ್ನು ಭಾರದ್ವಾಜರದೆಂದು ಹೇಳುವ ವಿಮಾನಶಾಸ್ತ್ರ ,ರಾಮಾಯಣದಲ್ಲಿ ಬರುವ ವಿಮಾನದ ಉಲ್ಲೇಖಗಳಿಂದ ನಮ್ಮಲ್ಲಿ ವಿಮಾನದ ಪರಿಕಲ್ಪನೆಯಿತ್ತು ಎಂದೆಷ್ಟೆ ನಿರೂಪಿಸಬಹುದು ,ಹೊರತು ವಿಮಾನವೇ ಇತ್ತು ಎಂದು ಹೇಳಬೇಕಾದರೆ ನಾವು ವಿಮಾನ ರಚನಾಕ್ರಮದ ಸಾಧ್ಯತೆಗೆ ಹತ್ತಿರವಾಗಿರುವ ಪ್ರಮಾಣಗಳಾನ್ನಾದರೂ ಉಲ್ಲೇಖಿಸಿ ಜಗತ್ತು ಒಪ್ಪುವ ಹಾಗೆ ಮಾಡಬೇಕಾಗುತ್ತದೆ. ಅಲ್ಲಿಯವರೆಗೆ ಅದು ಪರಿಕಲ್ಪನೆಯಾಗಿಯೆ ಉಳಿಯುತ್ತದೆ. ಇಂತಹ ಪರಿಕಲ್ಪನೆಗಳು ಬೇರೆ ಸಂಸ್ಕೃತಿಯಲ್ಲೂ ಇದ್ದವು ಎನ್ನುವುದು ನೆನಪಿಡಬೇಕಾದ ಅಂಶ .  ಇನ್ನೂ ಅಗಸ್ತ್ಯಸಂಹಿತೆಯಲ್ಲಿ ವಿದ್ಯುತ್ತಿನ ವಿವರಣೆ ಇದೆ ಎಂದು ಹೇಳುವವರಿಗೂ , ವೇದವ್ಯಾಸರು ಗಡಿಗೆಗಳಲ್ಲಿ ದುರ್ಯೋಧನಾದಿಗಳನ್ನು ಹುಟ್ಟಿಸಿರುವ ಉಲ್ಲೇಖವನ್ನು ಬಳಸಿ Stem cells ನ ಬಗ್ಗೆ ಜ್ಞಾನವಿತ್ತು ಎಂದು ವಾದಿಸುವವರಿಗೂ ಇದೆ ನಿಯಮ ಅನ್ವಯವಾಗುತ್ತದೆ .  ಇಲ್ಲವಾದಲ್ಲಿ ಈ ವಿಷಯವನ್ನು ವಿಜ್ಞಾನಸಮೂಹವು ಗಂಭೀರವಾಗಿ ಪರಿಗಣಿಸುವುದಿಲ್ಲ .

                         ಕೆಲವೂಂದು ವರ್ಗದವರು ಯಾರೋ ಒಬ್ಬ ವಿಜ್ಞಾನಿ ಎಂದು ಕರೆಸಿಕೊಳ್ಳುವವನು ನಾವು ಒಪ್ಪುವ ಸಿದ್ದಾಂತಕ್ಕೆ ಸಮಾನವಾದ ವಿಷಯವನ್ನು ಮಂಡಿಸಿದಾಕ್ಷಣ ಅದನ್ನು ಹೆಮ್ಮೆಯಿಂದ ವಿಜ್ಞಾನವು ನಾವು ಹೇಳುವ ವಿಷಯವನ್ನು ಒಪ್ಪಿದೆ ಎಂದು ಅಭಿಮಾನಪಡುವುದನ್ನು ನೋಡುತ್ತೀರಿ. ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ . ಧಾರ್ಮಿಕಪ್ರಪಂಚದಲ್ಲಿ ಹೇಗೆ ಪಂಡಿತನೆಂದು ,ಪುರೋಹಿತನೆಂದು ಕರೆಸಿಕೊಳ್ಳುವವನು ನಿಜವಾದ ಪುರೋಹಿತನೋ ,ಪಂಡಿತನೋ ಆಗಿರಲೇಬೇಕೆಂದು ನಿಯಮವಿಲ್ಲವೋ ಹಾಗೆಯೆ ವಿಜ್ಞಾನಿಗಳೆಂದು ಹೇಳಿಕೊಳ್ಳುವವರೆಲ್ಲಾ ನಿಜವಾದ ವಿಜ್ಞಾನಿಗಳಾಗಬೇಕೆಂದಿಲ್ಲಾ. ಇಂತಹ ವಿಜ್ಞಾನಿಗಳು ಎಲ್ಲಾ ಸಮಾಜದಲ್ಲಿರುವ ಕೆಲವು ಧಾರ್ಮಿಕ ನಂಬುಗೆಗಳನ್ನು ವಿಜ್ಞಾನದ ಜೋತೆಗೆ ತಳುಕು ಹಾಕಿ ಸಮಾಜದಲ್ಲಿ ಪ್ರಸಿದ್ಧಿಯನ್ನು ಪಡೆಯಲು ಬಯಸುತ್ತಿರುತ್ತಾರೆ , ಹೊರತು ಯಾವುದೇ ವೈಜ್ಞಾನಿಕ ಪ್ರಾಮಾಣಿಕತನ ಅವರಲ್ಲಿ ಇರುವುದಿಲ್ಲ. ಇಂತಹ So called ವಿಜ್ಞಾನಿಗಳ ಮಾತಿಗೆ  ವಿಜ್ಞಾನಮಂಡಲಿಯಲ್ಲಿ ಕವಡೆಕಾಸಿನ ಕಿಮ್ಮತ್ತು ಇರುವುದಿಲ್ಲ. ಇಂತಹ ವಿಷಯಗಳನ್ನು ಮೊದಲು ಹೆಮ್ಮೆಯಿಂದ ಹಂಚಿಕೊಂಡ ನಾವು ನಂತರ ಸಂದರ್ಭದಲ್ಲಿ ಸುಳ್ಳೆಂದೂ ಸಾಬೀತಾದಾದ  ನಗೆಪಾಟಲಿಗೀಡಾಗಿರುತ್ತೇವೆ . ಉದಾಹರಣೆಗೆ ಸನಾತನ ಧರ್ಮದಲ್ಲಿ ಪೂಜನೀಯವಾದ ಗೋವಿನ ಮೂತ್ರವು ಎಲ್ಲಾ ರೋಗಗಳನ್ನು ಗುಣಪಡಿಸಬಲ್ಲದು , ಗೋಮಯದಲ್ಲಿ Anti- diabetic ಗುಣಗಳಿವೆಯೆಂದು ವಿಜ್ಞಾನಿಗಳೆಂದು ಕರೆಸಿಕೊಳ್ಳುವವರು ಹೇಳುವುದನ್ನು ಕೇಳಿರಬಹುದು. ಇಂತಹವರು ಆಯುರ್ವೇದವನ್ನು ಅಭ್ಯಾಸಮಾಡಿರುವುದಿಲ್ಲ, ವಿಜ್ಞಾನವನ್ನು ಸರಿಯಾಗಿ ಅಧ್ಯಯನ ಮಾಡಿರುವುದಿಲ್ಲ . ಇಂತಹವರ ಬಗ್ಗೆ ನಾವೆಲ್ಲ ಜಾಗರೂಕರಾಗಿರಬೇಕು.
( ಗೋಮೂತ್ರಕ್ಕೆ ಶ್ರೇಷ್ಠತೆ ಖಂಡಿತ ಇದೆ. ಆದರೆ ಅದನ್ನು ಸಿದ್ಧಪಡಿಸಲು ಆಯುರ್ವೇದ ಮತ್ತು ಬೇರೆಯ ಶಾಖೆಗಳಲ್ಲಿ ಉಲ್ಲೇಖವಿಲ್ಲದ ವಿಷಯಗಳನ್ನು ಹೇಳಬೇಕಾಗಿಲ್ಲ ಎಂದಷ್ಟೇ ಅಭಿಪ್ರಾಯ  ಮತ್ತು ಈಗಾಗಲೇ ಆಯುರ್ವೇದ ಮತ್ತು ವಿಜ್ಞಾನ ಶಾಖೆಗಳಲ್ಲಿ ಸಿದ್ಧವಾಗಿರುವ ಪ್ರಾಮಾಣಿಕ ವಿಷಯಗಳನ್ನಿಟ್ಟುಕೊಂಡು ಅದರ ಹಿರಿಮೆಯನ್ನು ಮನದಟ್ಟು ಮಾಡಬಹುದು .. ಅಥವಾ ಹೊಸದಾಗಿ ಏನಾದರೂ ಸಂಶೋಧನೆಯನ್ನು ಕೂಡ ಪ್ರಾಮಾಣಿಕವಾಗಿ ಮಾಡಿ ಅದರ ಹಿರಿಮೆಯನ್ನು ಜಗತ್ತಿಗೆ ಸಾರಬಹುದು..  ಒಟ್ಟಾರೆ ಒಂದರ ಹಿರಿಮೆ ಸಾರಲು ಉಪಾಹೋಪದ ಮಾರ್ಗವನ್ನು ಅನುಸರಿಸುವುದು ಉಚಿತವಲ್ಲ ಎಂದಷ್ಟೇ ಅಭಿಪ್ರಾಯ...)ಇಂತಹ ವಿಜ್ಞಾನಿಗಳು ಇಸ್ಲಾಂ ,ಕ್ರಿಶ್ಚಿಯನ್ ಮೊದಲಾದ ಪಂಥಗಳಲ್ಲೂ ಇದ್ದಾರೆವಿಜ್ಞಾನದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿರುತ್ತಾರೆ .

 ಹಾಗಾದರೆ ಸನಾತನ ಸಂಸ್ಕೃತಿಯಲ್ಲಿ ವೈಜ್ಞಾನಿಕ ವಿಷಯಗಳಿಲ್ಲವೆ ಎನ್ನುವ ಪ್ರಶ್ನೆ ಮೂಡವುದು ಸಹಜ. ಖಂಡಿತವಾಗಿಯೂ ಅನೇಕ ವಿಷಯಗಳಿವೆ . ಗಣಿತ , ರಸಾಯನ ವಿಜ್ಞಾನ , ಖಗೋಳ ಶಾಸ್ತ್ರ ಮುಂತಾದ ಅನೇಕ ವಿಚಾರಗಳನ್ನು ಜಗತ್ತು ಒಪ್ಪುವ ಹಾಗೆ ಮಂಡಿಸುವ ಅವಕಾಶವಿದೆ . ಅನೇಕರು ಆ ವಿಷಯಗಳಲ್ಲಿ ಕೆಲಸ ಮಾಡಿದ್ದಾರೆ . ಆದರೆ ಅದಕ್ಕೆ ಶಿಸ್ತುಬದ್ಡವಾದ ಪರಿಶ್ರಮ ಬೇಕಾಗುತ್ತದೆ. ಉದಾಹರಣೆಗೆ ರಾಜೀವ ಮಲ್ಹೋತ್ರಾರವರ ಇನ್ಫಿನಿಟಿ ಫೌಂಡೇಶನ್ ರವರು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಅನೇಕ ಪುಸ್ತಕಗಳನ್ನು ಪ್ರಕಾಶಿಸಿದ್ದಾರೆ . ಉದಾಹರಣೆಗೆ ಇವರು ಪ್ರಕಾಶಿಸಿದ  Harappn Architecuture and Civil Engineering: Conttribution to History of Indian Science and Technology series.  Marvels of Indian Iron Through the Ages. History of Iron Technology in India.  Traditional Water Management. Indian Zinc Technology In a global perspective ಪುಸ್ತಕಗಳು ಭಾರತೀಯ ವಿಜ್ಞಾನವನ್ನು ಸಾಧಾರವಾಗಿ ಸಪ್ರಾಮಾಣವಾಗಿ ನಿರೂಪಿಸುತ್ತವೆ . ಈ ರೀತಿಯಾದ ಪುಸ್ತಗಳನ್ನು ಅಧ್ಯಯನ ಮಾಡುವ ಮತ್ತು ಇಂತಹ ಪುಸ್ತಕಗಳನ್ನು ಬರೆಯುವ ಹಾಗು  ಸಂಸ್ಕೃತ ಮತ್ತು ವಿಜ್ಞಾನದ ಮಧ್ಯದಲ್ಲಿರುವ ಕಂದಕವನ್ನು ತುಂಬುವ ಯುವ ಪೀಳಿಗೆಗಳನ್ನು ತಯಾರು ಮಾಡಬೇಕು . ಅಂತಹ ಸಂಸ್ಥೆಗಳು ಹುಟ್ಟಬೇಕು ಮತ್ತು ಅವುಗಳನ್ನು ಪ್ರೋತ್ಸಾಹಿಸುವ ಮನಸ್ಥಿತಿಯು ನಮ್ಮಲ್ಲಿ ಬೆಳೆಯಬೇಕು. ಈಗ ಕೇವಲ ವಿಷಯ ಗೊತ್ತಿಲ್ಲದೆ ಉದಾಸೀನ ಮಾಡುವ , ಅಥವಾ ವಿಷಯ ಗೊತ್ತಿಲ್ಲದೆ ಹೆಮ್ಮೆ ಪಡುವ ವರ್ಗವೆ ದೊಡ್ಡದಾಗಿದೆ.  ಇನ್ನು ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕತೆಯನ್ನು ಹುಡುಕುವ ಹಪಹಪಿತನ ಬೇಡ . ಹೀಗಾದಲ್ಲಿ ಅನಾವಶ್ಯಕವಾಗಿ ವಿಜ್ಞಾನವನ್ನೆ ಪರಮಪ್ರಮಾಣವನ್ನಾಗಿಸಿದಂತಾಗುತ್ತದೆ. ವೈಜ್ಞಾನಿಕವಲ್ಲದ್ದು ಅವೈಜ್ಞಾನಿಕವಾಗಬಹುದೆ ಹೋರತು , ಅಜ್ಞಾನ ಅಥವಾ ಮೂರ್ಖತನವಾಗುವುದಿಲ್ಲ. ನಮ್ಮ ಅನೇಕ ಆಚರಣೆಗಳಿಗೆ ಮನೋವಿಜ್ಞಾನದ ಹಿನ್ನಲೆಗಳಿರುತ್ತವೆ (ಮನೋ ವಿಜ್ಞಾನವನ್ನು ವಿಜ್ಞಾನವೆಂದು ಪರಿಗಣಿಸುವುದಿಲ್ಲ, ವಿಜ್ಞಾನವು ಕಾರ್ಯಕಾರಣ ಭಾವ ಮತ್ತು ಗಣಿತವನ್ನು ಆಧರಿಸಿರುವಂತದ್ದು. ಹಲವು ಬಾರಿ ಪ್ರಯೋಗ ಮಾಡಿದಾಗಲೂ ಒಂದೆ ರೀತಿಯಾದ ಫಲವು ಬರಬೇಕು. ಮನೋ ವಿಜ್ಞಾನ , ಜ್ಯೋತಿಷ್ಯ, ರೇಖಿ  ಮುಂತಾದವುಗಳು ಇಂತಹ ಫಲಿತಾಂಶವನ್ನು ಕೊಡುವುದಿಲ್ಲ) ಇನ್ನೂ ಅನೇಕ ಆಚರಣೆಗಳಿಗೆ ಮಾನಸಿಕ ಶಾರೀರಿಕ ಶೌಚದ ಹಿನ್ನಲೆಯಿರುತ್ತದೆ. ಉಪವಾಸ ಮುಂತಾದ ವೃತಗಳಿಗೆ ಇಂದ್ರಿಯನಿಗ್ರಹದ ಉದ್ಡೇಶವಿರುತ್ತದೆ. ಇದೆಲ್ಲವನ್ನು ಪ್ರಯತ್ನಪಟ್ಟು ನಾವು ಅರ್ಥಮಾಡಿಕೊಂಡಾಗ , ಇನ್ನೂಬ್ಬರಿಗೂ ಅರ್ಥಮಾಡಿಸಿದಾಗ ಶ್ರದ್ಧೆಯು ಖಂಡಿತವಾಗಿ ಹುಟ್ಟುತ್ತದೆ .ಎಲ್ಲದಕ್ಕೂ ವಿಜ್ಞಾನದ ಬಾಲವನ್ನು ಹಿಡಿಯುವುದು ತಪ್ಪುತ್ತದೆ. 



                                   

Comments

  1. ತುಂಬಾ ಗಮನಿಸಬೇಕಾದ ಸಂಗತಿ
    ಲೇಖನ ತುಂಬಾ ಪ್ರಸ್ತುತವಾಗಿದೆ

    ReplyDelete
  2. ಬಹುಪ್ರಸ್ತುತವಾದ ಲೇಖನ. ಆಚರಣೆಗಳಿಗೆ ಶ್ರದ್ಧೆ ಸಾಕು, ವಿಜ್ಞಾನದ ಅಗತ್ಯವಿಲ್ಲವೆಂಬುದನ್ನು ಸೊಗಸಾಗಿ ನಿರೂಪಿಸಿದ್ದೀರಿ.

    ReplyDelete

Post a Comment

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting